ಕರ್ನಾಟಕ

karnataka

By ETV Bharat Karnataka Team

Published : Dec 3, 2023, 8:36 PM IST

ETV Bharat / bharat

ರಾಜಸ್ಥಾನದಲ್ಲಿ ಸ್ವಯಂಕೃತ ಅಪರಾಧಗಳಿಂದಲೇ ಕಾಂಗ್ರೆಸ್‌ ಸೋಲು?

Rajasthan Assembly election result 2023: ಮರಭೂಮಿ ರಾಜ್ಯ ರಾಜಸ್ಥಾನದಲ್ಲಿ ಕಾಂಗ್ರೆಸ್​ ಘಟಕದಲ್ಲಿನ ಆಂತರಿಕ ಕಚ್ಚಾಟವೇ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

Etv Bharat
Etv Bharat

ಜೈಪುರ (ರಾಜಸ್ಥಾನ):ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತ ಪಕ್ಷವನ್ನು ಬದಲಾಯಿಸುವ ಸಂಪ್ರದಾಯವನ್ನು ಕಳೆದ ಮೂರು ದಶಕಗಳಿಂದ ಇಲ್ಲಿನ ಮತದಾರ ಪ್ರಭುಗಳು ಹಾಕಿಕೊಂಡಿದ್ದಾರೆ. ಈ ಬಾರಿ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಿದೆ. ಆದರೆ, ಇದರ ಮಧ್ಯೆಯೂ ಆಡಳಿತಾರೂಢ ಕಾಂಗ್ರೆಸ್​ ತನ್ನದೇ ಆದ ಸ್ವಯಂಕೃತ ಅಪರಾಧದಿಂದ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿರುವ ಬಗ್ಗೆ ಚರ್ಚೆ ಆರಂಭವಾಗಿದೆ.

ಮರಭೂಮಿ ರಾಜ್ಯದ ಕಾಂಗ್ರೆಸ್​ ಘಟಕದಲ್ಲಿನ ಆಂತರಿಕ ಕಚ್ಚಾಟವೇ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣ. ಸರ್ಕಾರದ ಬಗ್ಗೆ ಯುವಕರು, ಮಹಿಳೆಯರಲ್ಲಿ ಅಡಗಿದ್ದ ಕೋಪ ಜೊತೆಗೆ ಆಡಳಿತ ವಿರೋಧಿ ಅಲೆ, ನಕಾರಾತ್ಮಕ ಸಾಮಾಜಿಕ ಸಮೀಕರಣಗಳೆಲ್ಲವೂ ಕಾಂಗ್ರೆಸ್​ ಅಧಿಕಾರ ಕಳೆದುಕೊಳ್ಳಲು ಬೇಕಾದ ಅಂಶಗಳು ಎಂಬ ಮಾತುಗಳು ಕೇಳಿಬರುತ್ತಿವೆ. ಸರ್ಕಾರವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಹೀನಾಯ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಸ್ವಯಂಕೃತ ಅಪರಾಧಗಳೇ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಹಾನಿಯನ್ನುಂಟು ಮಾಡಿವೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಗಹ್ಲೋಟ್ ವರ್ಸಸ್​ ಪೈಲಟ್:ರಾಜಸ್ಥಾನ ಕಾಂಗ್ರೆಸ್​ನಲ್ಲಿ ಆಂತರಿಕ ಕಚ್ಚಾಟ ಬಹಿರಂಗವಾಗಿಯೇ ನಡೆಯುತ್ತಿತ್ತು. ಉನ್ನತ ನಾಯಕರಾದ ಸಿಎಂ ಅಶೋಕ್ ಗಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಘರ್ಷಣೆಗಳು ಪಕ್ಷದ ವರ್ಚಸ್ಸಿಗೆ ಅಪಾರ ಹೊಡೆತ ನೀಡಿವೆ. ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸಲು ಪೈಲಟ್ ಆಮರಣಾಂತ ಉಪವಾಸವನ್ನೂ ಕೈಗೊಂಡಿದ್ದರು. ಭ್ರಷ್ಟಾಚಾರದ ವಿರುದ್ಧದ ತನ್ನ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದರು. ಆದರೆ, ಇದರ ಪರಿಣಾಮ ಪಕ್ಷದ ವಲಯಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮುಳುಗಿಸಿದ 'ಮಹದೇವ್'; ಮೋದಿ ಅಸ್ತ್ರಕ್ಕೆ ಸಿಕ್ಕ ಗೆಲುವು!

ವಿವಿಧ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಸೋರಿಕೆ ವಿಚಾರವು ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ನಕಾರಾತ್ಮಕ ಅಂಶವಾಗಿ ಪರಿಣಮಿಸಿದೆ. ಸಿಎಂ ಅಶೋಕ್ ಗಹ್ಲೋಟ್ ಪ್ರತಿನಿಧಿಸುವ ಜೋಧ್‌ಪುರ ಜಿಲ್ಲೆಯಲ್ಲೂ ಜನರು ಪರೀಕ್ಷೆ ಪತ್ರಿಕೆಗಳ ಸೋರಿಕೆ ವಿಷಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ 18 ಬಾರಿ ಪ್ರಶ್ನೆಪತ್ರಿಕೆಗಳ ಸೋರಿಕೆಯಾದ ವರದಿಗಳಾಗಿವೆ. ಇದು ಯುವಕರಲ್ಲಿ ಸಿಟ್ಟನ್ನು ಹೆಚ್ಚಿಸಿತ್ತು. ಮತ್ತೊಂದೆಡೆ, ಚುನಾವಣೆ ಸಂದರ್ಭದಲ್ಲಿ ಸರ್ಕಾರ ಜಾರಿಗೆ ತಂದ ಯೋಜನೆಗಳು ಬೂತ್​ ಮಟ್ಟದಲ್ಲಿ ಸರಿಯಾಗಿ ಜಾರಿಯಾಗಿಲ್ಲ ಎಂಬ ಆಂತರಿಕ ಮಾತುಗಳು ಕಾಂಗ್ರೆಸ್​ನಲ್ಲೇ ಕೇಳಿ ಬಂದಿದ್ದವು. ಇದರಿಂದಾಗಿ ಯೋಜನೆಗಳ ಬಗ್ಗೆ ಸರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ.

ಕೈಕೊಟ್ಟ ಗುಜ್ಜರ್ ಮತದಾರರು?: ಅಷ್ಟೇ ಅಲ್ಲ, ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡಿದ್ದ ರೀತಿ ಗುಜ್ಜರ್ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಕಳೆದ ಚುನಾವಣೆಯಲ್ಲಿ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಗುಜ್ಜರ್ ಜನಾಂಗದವರು ಮತ ಹಾಕಿದ್ದರು. ಆದರೆ, ಈ ಬಾರಿ ಪಕ್ಷದಿಂದ ದೂರ ಸರಿದು, ಕಾಂಗ್ರೆಸ್​ಗೆ ಶಾಕ್ ನೀಡಿದ್ದಾರೆ.

ಇದನ್ನೂ ಓದಿ:ಸರ್ಕಾರ ರಚನೆಗೆ ಕಾಂಗ್ರೆಸ್ ಸಜ್ಜು: ತೆಲಂಗಾಣದ ಎರಡನೇ ಸಿಎಂ ಆಗುವ ನಿರೀಕ್ಷೆಯಲ್ಲಿ ರೇವಂತ್​ ರೆಡ್ಡಿ

ABOUT THE AUTHOR

...view details