ಕರ್ನಾಟಕ

karnataka

ETV Bharat / bharat

Assam flood: 13 ಜಿಲ್ಲೆಗಳಲ್ಲಿ ಪ್ರವಾಹ, 371 ಗ್ರಾಮಗಳು ಜಲಾವೃತ.. ಸಂಕಷ್ಟದಲ್ಲಿ ಒಂದು ಲಕ್ಷ ಜನ

ಅಸ್ಸೋಂದ 13 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಒಟ್ಟು 371 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಕಳೆದ 24 ಗಂಟೆಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 98,840 ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

By

Published : Jul 16, 2023, 10:54 PM IST

Assam flood situation worsens, About one lakh people affected
ಅಸ್ಸೋಂದ 13 ಜಿಲ್ಲೆಗಳಲ್ಲಿ ಪ್ರವಾಹ: 371 ಗ್ರಾಮಗಳು ಜಲಾವೃತ... ಸಂಕಷ್ಟದಲ್ಲಿ ಒಂದು ಲಕ್ಷ ಜನ

ಗುವಾಹಟಿ (ಅಸ್ಸೋಂ): ಈಶಾನ್ಯ ರಾಜ್ಯ ಅಸ್ಸೋಂದಲ್ಲಿ ಪ್ರವಾಹದ ಅಬ್ಬರ ಮುಂದುವರಿದಿದೆ. ಇದರ ನಡುವೆ ಭೂತಾನ್‌ನ ಕುರಿಚು ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಶನಿವಾರದಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದ ಹಲವು ಹೊಸ ಪ್ರದೇಶಗಳು ಜಲಾವೃತಗೊಂಡಿವೆ. ರಾಜ್ಯಾದ್ಯಂತ ಈವರೆಗೆ ಸುಮಾರು ಒಂದು ಲಕ್ಷ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಅಸ್ಸೋಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದ ಎಲ್ಲ ನದಿಗಳು ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿ ಹರಿಯುತ್ತಿವೆ. ಆದರೆ, ಪ್ರಸ್ತುತ ರಾಜ್ಯದ 13 ಜಿಲ್ಲೆಗಳು ಪ್ರವಾಹದ ಸುಳಿಯಲ್ಲಿವೆ. ಬಿಸ್ವನಾಥ್, ಚಿರಾಂಗ್, ದರ್ರಾಂಗ್, ಧೇಮಾಜಿ, ದಿಬ್ರುಗಢ್, ಗೋಲಾಘಾಟ್, ಲಖಿಂಪುರ, ಮಜುಲಿ, ಮೊರಿಗಾಂವ್, ನಾಗಾಂವ್, ಗೀತ್‌ಪುರ್, ಸೋನಿತ್‌ಪುರ್ ಮತ್ತು ತಮುಲ್‌ಪುರ್ ಜಿಲ್ಲೆಗಳು ಪ್ರವಾಹ ಪೀಡಿತ ಜಿಲ್ಲೆಗಳಾಗಿವೆ.

ಈ 13 ಜಿಲ್ಲೆಗಳ 28 ಕಂದಾಯ ವೃತ್ತ ಅಧಿಕಾರಿಗಳ ಕಚೇರಿ ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಒಟ್ಟು 371 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 44,838 ಪುರುಷರು, 35,722 ಮಹಿಳೆಯರು ಮತ್ತು 18,280 ಮಕ್ಕಳು ಸೇರಿದಂತೆ ಒಟ್ಟು 98,840 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ:ಪ್ರವಾಹದ ರಭಸಕ್ಕೆ ಬ್ಯಾಲೆನ್ಸ್​ ಕಳೆದುಕೊಂಡ ದೋಣಿ... ಅಪಾಯದಿಂದ ಪಂಜಾಬ್ ಸಿಎಂ ಪಾರು

ಮತ್ತೊಂದೆಡೆ, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಒಟ್ಟು 66 ಪರಿಹಾರ ಕೇಂದ್ರಗಳಲ್ಲಿ 2,941 ಜನರು ಆಶ್ರಯ ಪಡೆಯುತ್ತಿದ್ದಾರೆ. ಇವರಲ್ಲಿ 1125 ಪುರುಷರು, 1130 ಮಹಿಳೆಯರು ಮತ್ತು 656 ಮಕ್ಕಳು ಸೇರಿದ್ದಾರೆ. ಇದಕ್ಕೆ ಸಮಾನಾಂತರವಾಗಿ 59,531 ಜಾನುವಾರುಗಳು ಸಹ ಪ್ರವಾಹಕ್ಕೆ ಸಿಲುಕಿವೆ. ಅಲ್ಲದೆ, 3618.35 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ.

ಭೂತಾನ್‌ನ ಕುರಿಚು ಅಣೆಕಟ್ಟಿನಿಂದ ನೀರು ಬಿಡುವುದರಿಂದ ಕೆಳ ಅಸ್ಸೋಂನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಏತನ್ಮಧ್ಯೆ, ಅರುಣಾಚಲದ ನೀರು ಮೇಲಿನ ಅಸ್ಸೋಂನಲ್ಲಿ ಸಂಕಷ್ಟವನ್ನು ಹೆಚ್ಚಿಸಿದೆ. ಜೊತೆಗೆ ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಮಟ್ಟವೂ ಹೆಚ್ಚಾಗಿದೆ. ಅಸ್ಸೋಂ ಹವಾಮಾನ ಕೇಂದ್ರದ ಅಂಕಿ-ಅಂಶಗಳ ಪ್ರಕಾರ, ಜುಲೈ 18ರ ವರೆಗೆ ರಾಜ್ಯದಲ್ಲಿ ಮಳೆ ಮತ್ತು ಮಿಂಚು ಮುಂದುವರಿಯಲಿದೆ.

ಈಶಾನ್ಯದೊಂದಿಗೆ ಉತ್ತರ ಭಾರತದಲ್ಲೂ ನಿರಂತರವಾಗಿ ಮಳೆಯಿಂದ ಪ್ರವಾಹ ಉಂಟಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ, ಉತ್ತರಾಖಂಡ, ಉತ್ತರಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ರಾಜ್ಯಗಳಲ್ಲಿ ಈಗಲೂ ರೆಡ್​ ಅಲರ್ಟ್​​ ಘೋಷಿಸಲಾಗಿದೆ.

ಇದನ್ನೂ ಓದಿ:ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಕೆ: ರಾಷ್ಟ್ರ ರಾಜಧಾನಿಗೆ ಮುಗಿಯದ ಪ್ರವಾಹ ಭೀತಿ

ABOUT THE AUTHOR

...view details