ಕರ್ನಾಟಕ

karnataka

By

Published : Jun 22, 2021, 3:52 PM IST

ETV Bharat / bharat

'ಕಿಮಿನ್' ಅಸ್ಸೋಂನ ಭಾಗ ಎಂದ ಬಿಆರ್​ಒ: ಆಕ್ರೋಶ ವ್ಯಕ್ತಪಡಿಸಿದ ಅರುಣಾಚಲ ಜನತೆ

ಕಿಮಿನ್ - ಪೋಟಿನ್ ರಸ್ತೆ ಸೇರಿದಂತೆ 17 ರಸ್ತೆಗಳನ್ನು ಉದ್ಘಾಟಿಸುವ ಸಂದರ್ಭದಲ್ಲಿ ಅಳವಡಿಸಲಾಗಿದ್ದ ಸೈನ್‌ಬೋರ್ಡ್‌ಗಳು ಮತ್ತು ಬ್ಯಾನರ್‌ಗಳಲ್ಲಿ ಕಿಮಿನ್​ ಅಸ್ಸೋಂನ ಭಾಗ ಎಂದು ಉಲ್ಲೇಖಿಸಿಲಾಗಿತ್ತು. ಈ ಘಟನೆಗೆ ವಿರೋಧ ವ್ಯಕ್ತಪಡಿಸಿದ ಅರುಣಾಚಲ ಪ್ರದೇಶದ ಜನತೆ ಪ್ರತಿಭಟನೆ ನಡೆಸಿದ್ದಾರೆ.

BRO
ಬಿಆರ್​ಒ

ಗುವಾಹಟಿ (ಅಸ್ಸೋಂ): 20 ಕಿ.ಮೀ ಉದ್ದದ ಕಿಮಿನ್ - ಪೋಟಿನ್ ರಸ್ತೆ ಸೇರಿದಂತೆ 17 ರಸ್ತೆಗಳನ್ನು ಉದ್ಘಾಟಿಸಲು ಜೂನ್ 17 ರಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶದ ಕಿಮಿನ್​ಗೆ ಭೇಟಿ ನೀಡಿದ್ದರು. ರಕ್ಷಣಾ ಸಚಿವರೊಂದಿಗೆ ಕೇಂದ್ರ ಸಚಿವ ಕಿರಣ್​ ರಿಜಿಜು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸಹ ಉಪಸ್ಥಿತರಿದ್ದರು.

ಇನ್ನು ಕಾರ್ಯಕ್ರಮವನ್ನು ಆಯೋಜಿಸಿದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್, ಅರುಣಾಚಲ್ ಬದಲಿಗೆ ಕಿಮಿನ್ ರಸ್ತೆಯನ್ನು ಅಸ್ಸೋಂನ ಭಾಗವೆಂದು ಉಲ್ಲೇಖಿಸಿದೆ. ಅರುಣಾಚಲ ಪ್ರದೇಶವನ್ನು ಉಲ್ಲೇಖಿಸಿರುವ ಸೈನ್‌ಬೋರ್ಡ್‌ಗಳು ಮತ್ತು ಬ್ಯಾನರ್‌ಗಳನ್ನು ಬಿಳಿ ಬಣ್ಣ ಹಚ್ಚಿ ಮರೆಮಾಚಲಾಗಿದೆ.

ಆಯಕಟ್ಟಿನ ಗಡಿ ಯೋಜನೆಗಳಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸುವುದನ್ನು ತಪ್ಪಿಸಲು ಅವರು ಅರುಣಾಚಲ ಪ್ರದೇಶದ ಹೆಸರನ್ನು ಮರೆಮಾಚಿದ್ದಾರೆ ಎಂದು ಬಿಆರ್​ಒ ಸಮರ್ಥನೆ ನೀಡಿದೆ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ಗೆ ರಾಜನಾಥ್ ಸಿಂಗ್ ಭೇಟಿ ನೀಡಿದ್ದನ್ನು ಕಳೆದ ವರ್ಷ ಚೀನಾ ತೀವ್ರವಾಗಿ ಆಕ್ಷೇಪಿಸಿತ್ತು. ಇನ್ನು ನೆರೆಯ ದೇಶವು ದಕ್ಷಿಣ ಟಿಬೆಟ್‌ನ ಒಂದು ಭಾಗವೆಂದು ಹೇಳಿಕೊಳ್ಳುತ್ತಿತ್ತು.

ಆಲ್ ಅರುಣಾಚಲ ಪ್ರದೇಶ ವಿದ್ಯಾರ್ಥಿ ಸಂಘ (ಎಎಪಿಎಸ್‌ಯು), ನೈಶಿ ವಿದ್ಯಾರ್ಥಿ ಸಂಘಟನೆ ಮತ್ತು ಆದಿ ಬೇನ್ ಕೆಬಾಂಗ್ ಮುಂತಾದ ಸಂಸ್ಥೆಗಳು ಘಟನೆ ಬಗ್ಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದೆ. ಅರುಣಾಚಲ ಪ್ರದೇಶದ ಅತ್ಯಂತ ಹಳೆಯ ಆಡಳಿತ ಕೇಂದ್ರಗಳಲ್ಲಿ ಒಂದಾದ ಕಿಮಿನ್ , ಅಸ್ಸೋಂನ ಒಂದು ಭಾಗ ಎಂದು ತಪ್ಪು ಉಲ್ಲೇಖ ಮಾಡಲಾಗಿದೆ ಎಂದು ಮೌನ ಪ್ರತಿಭಟನೆ ನಡೆಸಿದ್ದಾರೆ.

"ಅರುಣಾಚಲ ಪ್ರದೇಶದಲ್ಲಿ 11 ಹೊಸ ಮತ್ತು ಹಳೆಯ ಅಗಲವಾದ ರಸ್ತೆಗಳ ಉದ್ಘಾಟನೆಯ ಸಂದರ್ಭದಲ್ಲಿ ಕಿಮಿನ್ ಪ್ರದೇಶವನ್ನು ಅಸ್ಸೋಂ ಭಾಗ ಎಂದು ಉಲ್ಲೇಖಿಸುವ ಮೂಲಕ ಗಂಭೀರ ತಪ್ಪು ಮಾಡಲಾಗಿದೆ. ಈ ಘಟನೆಯ ನಂತರ ಈ ವಿಷಯ ನನ್ನ ಗಮನಕ್ಕೆ ಬಂದಿತು ಮತ್ತು ತುರ್ತು ಸರಿಪಡಿಸುವಿಕೆಗಾಗಿ ತಕ್ಷಣ ಬಿಆರ್​ಒಗೆ ಸೂಚಿಸಿದ್ದೇನೆ. ರಕ್ಷಣಾ ಸಚಿವರ ಮತ್ತು ಅರುಣಾಚಲ ಪ್ರದೇಶ ಸರ್ಕಾರದ ಅರಿವಿಗೆ ಬಾರದೇ ಈ ಘಟನೆ ಸಂಭವಿಸಿದೆ 'ಎಂದು ಕಿರಣ್​ ರಿಜಿಜು ಟ್ವೀಟ್ ಮಾಡಿದ್ದಾರೆ.

ಇನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಕೂಡ ಈ ಘಟನೆಯನ್ನು ಖಂಡಿಸಿದ್ದು, ದೋಷದ ಹಿಂದಿನ ಕಾರಣಗಳನ್ನು ಪತ್ತೆಹಚ್ಚಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ABOUT THE AUTHOR

...view details