ಕರ್ನಾಟಕ

karnataka

ETV Bharat / bharat

ಮಣಿಪುರ: ಭಾರತೀಯ ಯೋಧನ ಅಪಹರಿಸಿ ಹತ್ಯೆ - etv bharat kannada

ದುಷ್ಕರ್ಮಿಗಳು ಭಾರತೀಯ ಯೋಧನನ್ನು ಅಪಹರಿಸಿ ಹತ್ಯೆಗೈದ ಘಟನೆ ಮಣಿಪುರದಲ್ಲಿ ನಡೆದಿದೆ.

ಭಾರತೀಯ ಯೋಧನ ಅಪರಿಸಿ ಹತ್ಯೆ
ಭಾರತೀಯ ಯೋಧನ ಅಪರಿಸಿ ಹತ್ಯೆ

By ETV Bharat Karnataka Team

Published : Sep 18, 2023, 8:16 AM IST

Updated : Sep 18, 2023, 12:52 PM IST

ಇಂಫಾಲ್​ (ಮಣಿಪುರ):ಮಣಿಪುರ ರಾಜಧಾನಿ ಇಂಫಾಲ್​ನಲ್ಲಿ ದುಷ್ಕರ್ಮಿಗಳು ಭಾರತೀಯ ಸೇನಾಪಡೆಯ ಯೋಧನನ್ನು ಅಪಹರಿಸಿ ಹತ್ಯೆಗೈದ ಘಟನೆ ವರದಿಯಾಗಿದೆ. ಭಾನುವಾರ ಖುನಿಂಗ್‌ಥೆಕ್ ಗ್ರಾಮದಲ್ಲಿ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುತಾತ್ಮ ಯೋಧನನ್ನು ಇಂಫಾಲ್ ಪಶ್ಚಿಮದ ತರುಂಗ್​ನ್​ ಮೂಲದ ಸೆರ್ಟೊ ತಂಗ್‌ಥಾಂಗ್ ಕೋಮ್ ಎಂದು ಗುರುತಿಸಲಾಗಿದೆ. ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್‌ನ ಯೋಧ (ರಕ್ಷಣಾ ಭದ್ರತಾ ದಳ) ಕೋಮ್​ರನ್ನು ಕಾಂಗ್‌ಪೋಕ್ಪಿ ಜಿಲ್ಲೆಯ ಲೆಮಾಖೋಂಗ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೋಮ್ ರಜೆ ಮೇಲೆ ತಮ್ಮ ಮನೆಗೆ ಹೋಗಿದ್ದರು. ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಅವರನ್ನು ಮನೆಯಿಂದ ಅಪಹರಿಸಿದ್ದಾರೆ. ಪ್ರತ್ಯಕ್ಷದರ್ಶಿಯಾಗಿದ್ದ 10 ವರ್ಷದ ಮಗ ಪೊಲೀಸರಿಗೆ ತಿಳಿಸಿರುವಂತೆ, ತಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು ಅಪರಿಚಿತರು ಮನೆಯೊಳಗೆ ಪ್ರವೇಶಿಸಿದ್ದಾರೆ. ತಂದೆಯ ಹಣೆಗೆ ಪಿಸ್ತೂಲ್ ಇರಿಸಿ ಬಲವಂತವಾಗಿ ಅವರನ್ನು ವಾಹನವೊಂದರಲ್ಲಿ ಕರೆದೊಯ್ದಿದ್ದಾರೆ.

ಭಾನುವಾರ ಬೆಳಗಿನ ಜಾವದವರೆಗೆ ಕೋಮ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಬೆಳಿಗ್ಗೆ 9:30ರ ಸುಮಾರಿಗೆ ಇಂಫಾಲ್ ಪೂರ್ವದ ಸೊಗೋಲ್ಮಾಂಗ್ ಪೊಲೀಸ್​ ಠಾಣಾ ವ್ಯಾಪ್ತಿಯ ಖುನಿಂಗ್‌ಥೆಕ್ ಗ್ರಾಮದಲ್ಲಿ ಶವ ಸಿಕ್ಕಿದೆ. ಸಹೋದರ ಮತ್ತು ಸೋದರಮಾವ ಕೋಮ್​ರ ಮೃತದೇಹವನ್ನು ಗುರುತಿಸಿದ್ದಾರೆ. ಯೋಧನ ತಲೆಗೆ ಗುಂಡು ತಗುಲಿದೆ. ಕೋಮ್ ಅವರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕುಟುಂಬದವರ ಇಚ್ಛೆಯಂತೆ ಮೃತದೇಹದ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. (ಪಿಟಿಐ)

ಆಕಸ್ಮಿಕವಾಗಿ ಗುಂಡು ಹಾರಿ ಯೋಧ ಸಾವು:ಬಂಡಿಪೋರಾ (ಜಮ್ಮು ಮತ್ತು ಕಾಶ್ಮೀರ): ಆಕಸ್ಮಿಕವಾಗಿ ಗುಂಡು ಹಾರಿ ಸಹೋದ್ಯೋಗಿ ಸೈನಿಕ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ಬಂಡಿಪೋರಾ ಜಿಲ್ಲೆಯಲ್ಲಿ ಭಾನುವಾರ ನಡೆದಿತ್ತು. ಗುಂಡು ಹಾರಿಸಿದ ಸೇನಾ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ಶಿಬಿರದಲ್ಲಿ ಭಾಗಿಯಾಗಿದ್ದಾಗ ಓರ್ವ ಯೋಧನ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಯೋಧ ಗಾಯಗೊಂಡಿದ್ದಾರೆ" ಎಂದು ತಿಳಿಸಿದ್ದರು.

ಬಿಎಸ್​ಎಫ್ ಯೋಧ ಆತ್ಮಹತ್ಯೆ:ಪಶ್ಚಿಮ ಬಂಗಾಳದ ಕೂಚ್ ಬೆಹಾರ್​ನ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸಿತಾಲ್ಕುಚಿ ಬ್ಲಾಕ್‌ ಎಂಬಲ್ಲಿ ಬಿಎಸ್‌ಎಫ್ ಯೋಧರೊಬ್ಬರು ತನ್ನ ಸರ್ವೀಸ್​ ರೈಫಲ್​ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ನಲ್ಲಬೋತುಲ ನಾರಾಯಣ ಸ್ವಾಮಿ ಆತ್ಮಹತ್ಯೆಗೆ ಮಾಡಿಕೊಂಡ ಯೋಧ ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ:ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಹೊಂಚು ಹಾಕಿ ಮೂವರು ಆದಿವಾಸಿಗಳ ಹತ್ಯೆ

Last Updated : Sep 18, 2023, 12:52 PM IST

ABOUT THE AUTHOR

...view details