ಕರ್ನಾಟಕ

karnataka

By

Published : Feb 22, 2023, 9:00 AM IST

ETV Bharat / bharat

ಕಾಯಿಲೆಯಿಂದ ಬಳಲುತ್ತಿರುವ ಕಂದನಿಗೆ ₹ 11 ಕೋಟಿ ನೆರವು.. ದೇವರನಾಡಿನ ಮಗುವಿಗೆ ಕರುಣಾಮಯಿ ಆದ ವ್ಯಕ್ತಿ

ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕೇರಳದ 16 ತಿಂಗಳ ಮಗುವಿಗೆ ವಿದೇಶದಿಂದ ಅಪರಿಚಿತ ವ್ಯಕ್ತಿಯೊಬ್ಬರು 11 ಕೋಟಿ ರೂ. ಧನಸಹಾಯ ಮಾಡಿದ್ದಾರೆ.

rare disease
ಧನ ಸಹಾಯ

ಎರ್ನಾಕುಲಂ (ಕೇರಳ): ದುಡ್ಡಿರುವ ಬಹುತೇಕರು ಯಾರಿಗಾದರೂ ಅಲ್ಪ ಸಹಾಯ ಮಾಡಿದರೆ ಸಾಕು, ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಆದ್ರೆ ದೇವರನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದ ಮಗುವಿಗೆ ಕರುಣಾಮಯಿಯೊಬ್ಬರು ಬರೋಬ್ಬರಿ 11 ಕೋಟಿ ರೂಪಾಯಿ ನೆರವು ನೀಡಿದರೂ ಸಹ ತನ್ನ ಹೆಸರನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದ್ದಾರೆ. ದಿನೇ ದಿನೇ ಘಟಿಸುತ್ತಿರುವ ಅಮಾನವೀಯ ಘಟನೆಗಳ ನಡುವೆಯೂ ಇನ್ನೂ ಮನುಷ್ಯತ್ವಕ್ಕೆ ಬೆಲೆ ಇದೆ ಎಂದು ಅನೇಕರು ತೋರಿಸಿಕೊಟ್ಟಿದ್ದಾರೆ. ಇದೀಗ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕೇರಳದ ಪುಟ್ಟ ಮಗುವಿಗೆ ವಿದೇಶದ ಅಪರಿಚಿತ ವ್ಯಕ್ತಿಯೊಬ್ಬರು 11 ಕೋಟಿ ರೂ. ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೇರಳದ 16 ತಿಂಗಳ ಮಗು ನಿರ್ವಾಣ್​ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ರೋಗದಿಂದ ಬಳಲುತ್ತಿದೆ. ಮಗುವನ್ನು ಕಾಯಿಲೆಯಿಂದ ಪಾರು ಮಾಡಲು ಮತ್ತು ಜೀವ ಉಳಿಸಲು 17 ಕೋಟಿ ರೂ. ಮೌಲ್ಯದ ಚುಚ್ಚುಮದ್ದಿನ ಅವಶ್ಯಕತೆ ಇದೆ. ಹೀಗಾಗಿ, ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರ್ವಾಣ್​ಗೆ ಸಹಾಯ ಮಾಡುವಂತೆ ಕೆಲ ಮೆಸೇಜ್‌ಗಳು ಹರಿದಾಡುತ್ತಿದ್ದವು.

ಪ್ರಪಂಚದ ವಿವಿಧ ಭಾಗಗಳಿಂದ ಮತ್ತು ವಿವಿಧ ಪ್ರದೇಶಗಳಿಂದ ಜನರು ತಮ್ಮ ಕೈಲಾದಷ್ಟು ಸಹಾಯವನ್ನು ನೀಡುತ್ತಲೇ ಇದ್ದರು. ಆದರೆ, 17 ಕೋಟಿ ರೂ ಮೊತ್ತವನ್ನು ತಲುಪುವುದು ಕಷ್ಟವಾಗಿತ್ತು. ಹೀಗಿರುವಾಗ ಅಪರಿಚಿತ ವ್ಯಕ್ತಿಯೊಬ್ಬರು ನಿರ್ವಾಣ್‌ಗೆ ವೈದ್ಯಕೀಯ ಸಹಾಯಕ್ಕಾಗಿ ಬರೋಬ್ಬರಿ 11 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ನೀಡಿದರೂ ಸಹ ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ. ಹೆಸರು ಅಥವಾ ಪ್ರಸಿದ್ಧಿಗಾಗಿ ಇದನ್ನು ಮಾಡುತ್ತಿಲ್ಲ, ಮಗು ಗುಣಮುಖವಾದರೆ ಅಷ್ಟೇ ಸಾಕು ಎಂದಿದ್ದಾರೆ. ಹಾಗೆಯೇ, ನಿರ್ವಾಣ್​ ಚೇತರಿಸಿಕೊಂಡ ನಂತರ ಮಗುವಿಗಾಗಿ ಇಷ್ಟು ದೊಡ್ಡ ಮೊತ್ತದ ಧನ ಸಹಾಯ ಮಾಡಿದ ವ್ಯಕ್ತಿಯನ್ನು ಭೇಟಿಯಾಗುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಕ್ರೌಡ್ ಫಂಡಿಂಗ್ ಮೂಲಕ ವಿದೇಶದಿಂದ ಹಣ ಬಂದಿದ್ದು, ಬಡ ಕುಟುಂಬ ಇನ್ನೂ 80 ಲಕ್ಷ ರೂಪಾಯಿ ಹಣ ಹೊಂದಿಸಬೇಕಿದೆ. ಉಳಿದ ಹಣಕ್ಕಾಗಿ ನಿರ್ವಾಣ್ ತಂದೆ ಸಾರಂಗ್ ಮತ್ತು ತಾಯಿ ಅತಿದಿ ಹರಸಾಹಸ ಪಡುತ್ತಿದ್ದಾರೆ. ಮಗುವಿಗೆ ಎರಡು ವರ್ಷ ತುಂಬುವ ಮುನ್ನವೇ ಔಷಧಿ ನೀಡಿದರೆ ಮಾತ್ರ ಚಿಕಿತ್ಸೆ ಫಲಕಾರಿಯಾಗಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಎಸ್‍ಎಂಎ ಕಾಯಿಲೆಗೆ ತುತ್ತಾದ ಮಗು.. ಜೀವ ಉಳಿಸಲು ಬೇಕಿದೆ 16 ಕೋಟಿ ರೂ. ಧನಸಹಾಯ

ಏನಿದು ಸ್ಪೈನಲ್ ಮಸ್ಕಲಾರ್ ಆಟ್ರೋಫಿ?: ಇದು ಮಾನವನ ನರಮಂಡಲದ ಮೇಲೆ ಪ್ರಭಾವ ಬೀರುವ ಹಾಗೂ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಯುಳ್ಳ ರೋಗ. ಈ ರೋಗ ಕಾಣಿಸಿಕೊಂಡರೆ ಸ್ನಾಯುಗಳು ಮತ್ತು ನರಮಂಡಲ (ಮುಖ್ಯವಾಗಿ ಮೆದುಳು) ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ 10,000 ಮಕ್ಕಳಲ್ಲಿ ಒಂದು ಮಗು ಈ ಕಾಯಿಲೆಗೆ ತುತ್ತಾಗುತ್ತದೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ ಒಂದು ವರ್ಷದಲ್ಲೇ ಮಕ್ಕಳು ಸಾಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಮಗುವಿನ ಚಿಕಿತ್ಸೆಗೆ ಹರಿದುಬಂತು 16 ಕೋಟಿ ರೂ.

ಕ್ರೌಡ್​ ಫಂಡಿಂಗ್ ಎಂದರೇನು? :ಕ್ರೌಡ್‌ ಫಂಡಿಂಗ್ ಎನ್ನುವುದು ಜನರ ಸಹಾಯದೊಂದಿಗೆ ಹಣವನ್ನು ಸಂಗ್ರಹಿಸುವ ಹೊಸ ತಂತ್ರ. ಆನ್‌ಲೈನ್ ಪ್ಲಾಟ್‌ಫಾರ್ಮ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚದ ಯಾವುದೇ ಭಾಗದಲ್ಲಿ ವಾಸಿಸುವ ಜನರು ಹಣದ ಅಗತ್ಯವಿರುವವರಿಗೆ ತಮ್ಮ ಬ್ಯಾಂಕ್​ ಅಕೌಂಟ್ ಮೂಲಕ ಹಣ ಕಳುಹಿಸಬಹುದಾಗಿದೆ.

ABOUT THE AUTHOR

...view details