ಪಾಟ್ನಾ (ಬಿಹಾರ) :ರಾಜಕೀಯ ಧುರೀಣರು, ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಝೀರೋ ಟ್ರಾಫಿಕ್ ಸೌಲಭ್ಯ ಕೆಲವೊಮ್ಮೆ ಅನಾಹುತವನ್ನೇ ಸೃಷ್ಟಿಸುತ್ತದೆ. ಅಗತ್ಯವಿದ್ದಾಗ ಇದರ ಬಳಕೆ ಉಚಿತವೇನೋ ಸರಿ. ಆದರೆ, ಆಂಬ್ಯುಲೆನ್ಸ್ ನಿಲ್ಲಿಸಿ ತೊಂದರೆ ನೀಡುವುದು ಅಕ್ಷಮ್ಯ. ಇಂಥದ್ದೇ ಘಟನೆ ಬಿಹಾರದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ.
ಸಿಎಂ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಗೆ ದಾರಿ ಮಾಡಿಕೊಡುವ ಭರದಲ್ಲಿ ಪೊಲೀಸರು ತುರ್ತು ಅಗತ್ಯವಿದ್ದ ರೋಗಿಯ ಆಂಬ್ಯುಲೆನ್ಸ್ ನಿಲ್ಲಿಸಿದ್ದಾರೆ. ರೋಗಿಯ ಕುಟುಂಬಸ್ಥರು ತುರ್ತಾಗಿ ಆಸ್ಪತ್ರೆಗೆ ತೆರಳಬೇಕು ಎಂದು ಕೇಳಿಕೊಂಡರೂ ಪೊಲೀಸರು ಮಾತ್ರ ಸಿಎಂ ಹೋಗುವವರೆಗೂ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಇದು ಟೀಕೆಗೆ ಗುರಿಯಾಗಿದೆ.
ಸೇತುವೆ ಮೇಲೆ ಆಂಬ್ಯುಲೆನ್ಸ್ಗೆ ತಡೆ:ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ಯಾವುದೇ ಕಾರ್ಯದ ನಿಮಿತ್ತ ತೆರಳುತ್ತಿದ್ದರು. ಈ ವೇಳೆ ಗೈಘಾಟ್ ಸೇತುವೆಯ ಬಳಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಲು ಪೊಲೀಸರು ಎದುರು ಸಂಚಾರವನ್ನು ನಿಲ್ಲಿಸಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗಿದೆ. ಇದೇ ವೇಳೆ ಮೂರ್ಛೆ ಹೋಗಿದ್ದ ರೋಗಿಯನ್ನು ಕುಟುಂಬಸ್ಥರೊಬ್ಬರು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಬಂದಿದ್ದರು.
ಝೀರೋ ಟ್ರಾಫಿಕ್ನಿಂದಾಗಿ ವಾಹನಗಳ ಮಧ್ಯೆ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡಿತ್ತು. ತುರ್ತಾಗಿ ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ ಕುಟುಂಬಸ್ಥರು ಪೊಲೀಸರು ಬಳಿ ಕೇಳಿಕೊಂಡಿದ್ದಾರೆ. ಆದರೆ, ಇದನ್ನು ಆರಕ್ಷಕರು ನಿರಾಕರಿಸಿದ್ದಾರೆ. ಸಿಎಂ ಬೆಂಗಾವಲು ಪಡೆ ಬರುವ ಕಾರಣ ಆಂಬ್ಯುಲೆನ್ಸ್ ಅನ್ನು ಅಲ್ಲಿಯೇ ತಡೆದಿದ್ದಾರೆ. ರೋಗಿಯ ಕುಟುಂಬಸ್ಥರು ಕಣ್ಣೀರು ಹಾಕಿ ಕೇಳಿಕೊಂಡರು ಬಿಡದೇ ಪೊಲೀಸರು ನಿಷ್ಕರುಣೆಯಿಂದ ನಡೆದುಕೊಂಡ ಆರೋಪ ಕೇಳಿಬಂದಿದೆ.