ಚಂಡೀಗಢ: ಪಂಜಾಬ್ ಕಾಂಗ್ರೆಸ್ನ ಜಟಾಪಟಿ ಮೇಲ್ನೋಟಕ್ಕೆ ಅಂತ್ಯಕಂಡರೂ ನಾಯಕರ ನಡುವಿನ ಅಸಮಾಧಾನ ಮತ್ತೆ ಮುಂದುವರೆದಿದೆ. ರಾಜ್ಯಾಧ್ಯಕ್ಷ ಪಟ್ಟ ಸಂಬಂಧ ನಾಯಕ ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಅಮರಿಂದರ್ ಸಿಂಗ್ ನಡುವಿನ ಕದನ ಸದ್ಯ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.
‘ಸಾರ್ವಜನಿಕವಾಗಿ ಕ್ಷಮೆ ಕೇಳುವವರೆಗೂ ಸಿಧು ಭೇಟಿ ಸಾಧ್ಯವಿಲ್ಲ’: ಕ್ಯಾಪ್ಟನ್ ಪಟ್ಟು - ಕಾಂಗ್ರೆಸ್ನ ಜಟಾಪಟಿ
ಪಂಜಾಬ್ ಕಾಂಗ್ರೆಸ್ನಲ್ಲಿ ಏರ್ಪಟ್ಟಿದ್ದ ರಾಜ್ಯಾಧ್ಯಕ್ಷ ಹುದ್ದೆಯ ಬಿಕ್ಕಟ್ಟು ತಣ್ಣಗಾದರೂ, ನಾಯಕರ ನಡುವಿನ ಬಿರುಕು ಶಮನವಾಗಿಲ್ಲ. ಸಿಧು ವಿರುದ್ಧ ಸಿಎಂ ಅಮರಿಂದರ್ ಸಿಂಗ್ ಅಸಮಾಧಾನ ಮುಂದುವರೆದಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ.

ಇದೆಲ್ಲದರ ನಡುವೆ ಹೊಸದಾಗಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರಿದ ನವಜೋತ್ ಸಿಂಗ್ ಸಿಧು, ಸಿಎಂ ಅಮರಿಂದರ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಮಾಧ್ಯಮ ಸಲಹೆಗಾರ ರವೀನ್ ಥುಕ್ರಾಲ್, ಸಾಮಾಜಿಕ ಜಾಲತಾಣದಲ್ಲಿ ಸಿಧು ಸಿಎಂ ವೈಯಕ್ತಿಕ ವಿಚಾವಾರವಾಗಿ ಅವಹೇಳನ ಮಾಡಿದ್ದಾರೆ. ಹೀಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಅಮರಿಂದರ್ ಸಿಂಗ್ ಭೇಟಿಯಾಗಲ್ಲ ಎಂದಿದ್ದಾರೆ.
ಸಿಎಂ ಅಮರಿಂದರ್ ಸಿಂಗ್ ಭೇಟಿಗೆ ಸಿಧು ಸಮಯ ಕೇಳಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಯಾವುದೇ ಸಮಯ ನಿಗದಿಯಾಗಿಲ್ಲ. ನಿಲುವಿನಲ್ಲೂ ಯಾವ ಬದಲಾವಣೆಯೂ ಇಲ್ಲ. ಸಾರ್ವಜನಿಕವಾಗಿ ಅವರು ಕ್ಷಮೆ ಕೇಳುವವರೆಗೂ ಸಿಎಂ ಅವರನ್ನು ಭೇಟಿಯಾಗುವುದಿಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.