ಜೈಪುರ್(ರಾಜಸ್ಥಾನ):ಮಹತ್ವದ ರಾಜಕೀಯ ಬೆಳವಣಿಗೆವೊಂದರಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Gehlot cabinet )ನೇತೃತ್ವದ ಎಲ್ಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಾಳೆ ಅಥವಾ ನಾಡಿದ್ದು ಹೊಸ ಕ್ಯಾಬಿನೆಟ್(Rajasthan Cabinet Reshuffle) ನೊಂದಿಗೆ ನೂತನ ಸರ್ಕಾರ ಜಾರಿಗೆ ಬರುವ ಸಾಧ್ಯತೆ ಇದೆ.
ಕಳೆದ ಕೆಲ ದಿನಗಳಿಂದ ರಾಜಸ್ಥಾನದಲ್ಲಿ ಸಚಿವ ಸಂಪುಟ(Resignation of Gehlot cabinet) ಪುನರ್ ರಚನೆ ವಿಚಾರವಾಗಿ ಹಗ್ಗ-ಜಗ್ಗಾಟ ನಡೆಯುತ್ತಿದ್ದು, ಅಶೋಕ್ ಗೆಹ್ಲೋಟ್ ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ಭೇಟಿಯಾಗಿದ್ದಾರೆ. ಇದರ ಬೆನ್ನಲ್ಲೇ ಇಂದು ಈ ಬೆಳವಣಿಗೆ ನಡೆದಿದೆ. ಉಪಮುಖ್ಯಮಂತ್ರಿಯಾಗಿರುವ ಸಚಿನ್ ಪೈಲಟ್(Deputy Chief Minister Sachin Pilot) ಬೆಂಬಲಿಗರು ಹೆಚ್ಚಿನ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿರಿ:ಮಸೂದೆ ಜಾರಿ, ರದ್ದುಗೊಳಿಸಿದಾಗಲೂ ಪ್ರಿಯಾಂಕಾ ಗಾಂಧಿಗೆ ಸಮಸ್ಯೆ, ಅವರಿಗೆ ಏನು ಬೇಕು?: ಕೈ ರೆಬಲ್ ಶಾಸಕಿ ಪ್ರಶ್ನೆ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸದಲ್ಲಿ ಈಗಾಗಲೇ ಸಚಿವ ಸಂಪುಟ(Cabinet Meet) ಸಭೆ ನಡೆದಿದ್ದು, ಇದರ ಬೆನ್ನಲ್ಲೇ ಎಲ್ಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಭವನಕ್ಕೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರಮುಖವಾಗಿ ಶಿಕ್ಷಣ ಸಚಿವ ಗೋವಿಂದ್ ದೋಟಸಾರ, ಆರೋಗ್ಯ ಸಚಿವ ರಘು ಶರ್ಮಾ, ಕಂದಾಯಮಂತ್ರಿ ಹರೀಶ್ ಚೌಧರಿ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Rajasthan CM Ashok Gehlot) ಇಂದು ಅಥವಾ ನಾಳೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರಾದ ಕಲರಾಜ್ ಮಿಶ್ರಾ ಅವರನ್ನ ಭೇಟಿ ಮಾಡಲಿದ್ದು, ಹೊಸದಾಗಿ ಸರ್ಕಾರ ರಚನೆ ಮಾಡಲು ಅವಕಾಶ ಕೇಳುವ ಸಾಧ್ಯತೆ ಇದೆ. ಜೊತೆಗೆ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ರಾಜಸ್ಥಾನದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದನ್ನ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್(congress high command) ಇದೀಗ ಹೊಸ ಮುಖಗಳಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಣೆ ಹಾಕುವ ಸಾಧ್ಯತೆ ಕೂಡ ದಟ್ಟವಾಗಿದೆ.