ನವದೆಹಲಿ: ಹೆಮ್ಮಾರಿ ಕೊರೊನಾ ಇಡೀ ಭೂ ಮಂಡಲವನ್ನೇ ಈಗ ಒತ್ತೆಯಾಳಾಗಿ ಇಟ್ಟುಕೊಂಡಿದೆ. ದೇಶದ ಆರ್ಥಿಕ ಬಲವನ್ನು ಸಹ ಕಸಿದುಕೊಂಡಿರುವ ಕೊರೊನಾವನ್ನು ನಾವೆಲ್ಲರೂ ಒಂದೇ ಎಂದ ಆತ್ಮಬಲದಿಂದ ಸೋಲಿಸಬೇಕಿದೆ ಎಂದು ವಿಪ್ರೋ ಸಮೂಹದ ಸಂಸ್ಥಾಪಕ ಅಧ್ಯಕ್ಷ ಅಜೀಮ್ ಪ್ರೇಮ್ಜಿ ಹೇಳಿದ್ದಾರೆ.
ಗಂಡಾಂತರದಿಂದ ಹೊರಬರಲು ದೇಶಕ್ಕೆ ಇದೊಂದೇ ಅಸ್ತ್ರ: ಅಜೀಮ್ ಪ್ರೇಮ್ಜಿ - ಕುಗ್ಗಿರುವ ಆರ್ಥಿಕ ಚಟುವಟಿಕೆಗಳು
ನಮ್ಮ ಒಗ್ಗಟ್ಟು ಈ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಬಹುದು. ನಮ್ಮ - ನಿಮ್ಮಗಳ ನಡುವಿನ ವ್ಯತ್ಯಾಸವನ್ನು ದೂರವಿಟ್ಟು ಏಕತೆ ಸ್ಮರಿಸುವ ಕಾಲ ಬಂದೊದಗಿದೆ. ಗಂಡಾಂತರದಿಂದ ಹೊರಬರಲು ಇದೊಂದೇ ಅಸ್ತ್ರ ಎಂದು ಅಜೀಮ್ ಪ್ರೇಮ್ಜಿ ಕಿವಿ ಮಾತು ಹೇಳಿದ್ದಾರೆ.
![ಗಂಡಾಂತರದಿಂದ ಹೊರಬರಲು ದೇಶಕ್ಕೆ ಇದೊಂದೇ ಅಸ್ತ್ರ: ಅಜೀಮ್ ಪ್ರೇಮ್ಜಿ All must come together to fight against coronavirus; Azim Premji](https://etvbharatimages.akamaized.net/etvbharat/prod-images/768-512-11737224-892-11737224-1620830756832.jpg)
ದೇಶದ ಆರ್ಥಿಕ ಬಲದ ಜೊತೆಗೆ ಆತ್ಮಬಲವನ್ನು ಕುಗ್ಗಿಸಿರುವ ಕೊರೊನಾ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ಈಗ ವಿಷವರ್ತುಲದಲ್ಲಿ ಸಿಲುಕಿದ್ದೇವೆ. ದೇಶದ ಪರಿಸ್ಥಿತಿ ನೋಡಿದರೆ ಹೃದಯ ಚೂರಾಗುತ್ತದೆ. ಕೊರೊನಾ ಕೇವಲ ಸಾಂಕ್ರಾಮಿಕ ರೋಗ ಮಾತ್ರವಲ್ಲ, ಇದು ಜನರ ಜೀವನವನ್ನು ಹಾಳು ಮಾಡುವ ಪೆಡಂಭೂತವಾಗಿ ಬೆಳೆದಿದೆ.
ಈ ಪರಿಸ್ಥಿತಿಯಲ್ಲಿ ದೇಶವು ಒಂದಾಗಬೇಕು. ದೇಶಕ್ಕೆ ಈಗ ಏಕತೆಯ ಅಗತ್ಯವಿದೆ. ಈ ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮಲ್ಲಿರುವ ಮೇಲು - ಕೀಳು ಎಂಬ ವ್ಯತ್ಯಾಸವನ್ನು ಬಿಡಬೇಕು. ನಾವೆಲ್ಲರೂ ಒಂದು ಎಂಬ ಮನೋಭಾವನೆ ಬರಬೇಕು. ಅಂದಾಗ ಮಾತ್ರ ಈ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಬಹುದು. ಕುಗ್ಗಿರುವ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿ ಎಂದು ಕಿವಿ ಮಾತು ಹೇಳಿದ್ದಾರೆ.