ಕರ್ನಾಟಕ

karnataka

By ETV Bharat Karnataka Team

Published : Oct 3, 2023, 11:02 AM IST

ETV Bharat / bharat

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಗುಂಡಿನ ಚಕಮಕಿ: ಮೂವರು ವಿದ್ಯಾರ್ಥಿಗಳಿಗೆ ಗಾಯ

ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಗುಂಪಿನ ಮಧ್ಯೆ ಗುಂಡಿನ ದಾಳಿ ನಡೆದಿದ್ದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ

ಅಲಿಗಢ(ಉತ್ತರ ಪ್ರದೇಶ):ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಸದ್ಯ ಗಾಯಾಳುಗಳನ್ನು ಜೆಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಬಂದೂಕಿನಿಂದ ಹಲವು ಸುತ್ತುಗಳ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಒಂದೇ ಗುಂಪಿನ ಮೂವರು ವಿದ್ಯಾರ್ಥಿಗಳು ಗುಂಡು ಹಾರಿಸಿದ್ದು, ಈ ವೇಳೆ ಓರ್ವ ವಿದ್ಯಾರ್ಥಿಯ ಎದೆಗೆ ಗುಂಡು ತಗುಲಿದೆ. ಈ ಘಟನೆಯನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಚಳವಳಿಗೆ ಲಿಂಕ್​ ಮಾಡಲಾಗುತ್ತಿದೆ.

ಮೊರಾದಾಬಾದ್ ನಿವಾಸಿಗಳಾದ ಸಾದಿಕ್, ಅಬ್ದುಲ್ಲಾ ಮತ್ತು ಫಿರೋಜ್ ಆಲಂ ಗಾಯಗೊಂಡ ವಿದ್ಯಾರ್ಥಿಗಳು. ಬಿಎಂ ಹಾಸ್ಟೆಲ್‌ನ ಕೆಲವು ವಿದ್ಯಾರ್ಥಿಗಳು ಕುಳಿತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆ ವೇಳೆ, 10-12 ಮುಸುಕುಧಾರಿ ದಾಳಿಕೋರರು ಬೈಕ್‌ಗಳಲ್ಲಿ ಅಲ್ಲಿಗೆ ಬಂದು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದ ನಂತರ ಅವರೆಲ್ಲ ಓಡಿಹೋಗಿದ್ದಾರೆ.

ಎಎಂಯು ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿಯಿಂದಾಗಿ ಕೋಲಾಹಲ ಉಂಟಾಯಿತು. ಮಾಹಿತಿ ಪ್ರಕಾರ, ಸ್ವಲ್ಪ ಸಮಯದ ನಂತರ ಮುಸುಕುಧಾರಿ ದಾಳಿಕೋರನು ಕರೆ ಮಾಡಿ ಇತರ ಗುಂಪನ್ನು ಸರ್ ಸೈಯದ್ ನಾರ್ತ್ ಹಾಸ್ಟೆಲ್‌ಗೆ ರಾಜಿ ಮಾಡಿಕೊಳ್ಳಲು ಕರೆದಿದ್ದಾನೆ. ತಕ್ಷಣ ಇತರ ಗುಂಪಿನ ವಿದ್ಯಾರ್ಥಿಗಳು ಅಲ್ಲಿಗೆ ತಲುಪಿದ್ದಾರೆ ಎನ್ನಲಾಗಿದೆ. ನಂತರ ಮತ್ತೆ ಗುಂಡಿನ ದಾಳಿ ನಡೆದಿದ್ದು ಖಾಸಗಿ ಕಾಲೇಜಿನಲ್ಲಿ ಬಿಯುಎಂಎಸ್ ಓದುತ್ತಿದ್ದ ಮೊರಾದಾಬಾದ್‌ನ ಸಾದಿಕ್ ಗಂಭೀರ ಗಾಯಗೊಂಡಿದ್ದಾನೆ.

ಇದಲ್ಲದೇ ಫಿರೋಜ್ ಆಲಂ ಮತ್ತು ಅಬ್ದುಲ್ಲಾಗೆ ಕೂಡ ಬುಲೆಟ್​ನ ಚೂರುಗಳು ತಗುಲಿವೆ. ಗುಂಡಿನ ಚಕಮಕಿ ಮತ್ತು ಗಲಾಟೆಯ ಸುದ್ದಿ ತಿಳಿದ ಎಎಂಯುನ ಪ್ರೊಕ್ಟರ್ ತಂಡ ಕೂಡ ಘಟನಾ ಸ್ಥಳಕ್ಕೆ ತಲುಪಿತ್ತು. ಬಂದೂಕಿನ ದಾಳಿಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಸಿವಿಲ್ ಲೈನ್ ಉಸ್ತುವಾರಿ ವಿಜಯ್ ಸಿಂಗ್ ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಇರಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇನ್ನು ವಿವಿಯಲ್ಲಿ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯನ್ನು ಕೂಡ ನಡೆಸುತ್ತಿದ್ದಾರೆ.

ರಾಜಧಾನಿ ಲಖನೌದಲ್ಲಿಯೂ ನಡೆದಿತ್ತು ಗುಂಡಿನ ದಾಳಿ: ಸೆಪ್ಟೆಂಬರ್​ 21 ರ ತಡರಾತ್ರಿ ಪಾರ್ಟಿಯ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಗುಂಡೇಟಿಗೆ ಬಲಿಯಾಗಿರುವ ಘಟನೆ ನಡೆದಿತ್ತು. ಬಿಬಿಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಗಣೇಶ ಚತುರ್ಥಿ ಕಾರ್ಯಕ್ರಮದ ಬಳಿಕ ಮೃತ ವಿದ್ಯಾರ್ಥಿನಿ ನಿಷ್ಠಾ ದಯಾಳ್ ರೆಸಿಡೆನ್ಸಿಗೆ ಹೋಗಿದ್ದರು. ಇಲ್ಲಿ ಪಾರ್ಟಿಯ ಸಮಯದಲ್ಲಿ ನಿಷ್ಠಾಗೆ ಗುಂಡು ತಗುಲಿ ಸಾವನ್ನಪ್ಪಿದ್ದಳು.

ಇದನ್ನೂ ಓದಿ:ಅಮಾನುಷ..! ಪುಟ್ಟ ಬಾಲಕನನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಸ್ಥಳೀಯರು.. ವಿಡಿಯೋ ವೈರಲ್​

ABOUT THE AUTHOR

...view details