ಕರ್ನಾಟಕ

karnataka

By PTI

Published : Sep 25, 2023, 5:56 PM IST

Updated : Sep 25, 2023, 6:21 PM IST

ETV Bharat / bharat

AIADMK-BJP: ಎನ್​ಡಿಎ ಕೂಟದಿಂದ ಎಐಎಡಿಎಂಕೆ ಔಟ್​; ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿಗೆ ಶಾಕ್​, ತೃತೀಯ ರಂಗದ ನೇತೃತ್ವ?

ಬಿಜೆಪಿ ನೇತೃತ್ವದ ಎನ್​ಡಿಎ ಕೂಟದಿಂದ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಹೊರಬಂದಿದೆ.

ಎನ್​ಡಿಎ ಕೂಟದಿಂದ ಎಐಎಡಿಎಂಕೆ ಹೊರಕ್ಕೆ
ಎನ್​ಡಿಎ ಕೂಟದಿಂದ ಎಐಎಡಿಎಂಕೆ ಹೊರಕ್ಕೆ

ನವದೆಹಲಿ:ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​, ಆಪ್​, ಆರ್​ಜೆಡಿ ಸೇರಿದಂತೆ ಎಲ್ಲ ವಿಪಕ್ಷಗಳು 'ಇಂಡಿಯಾ' ಕೂಟ ಕಟ್ಟಿಕೊಂಡು ಬಿಜೆಪಿ ನೇತೃತ್ವದ ಎನ್​ಡಿಎ ಬಣದ ವಿರುದ್ಧ ಹೋರಾಡಲು ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಬಿಜೆಪಿಗೆ ಮಿತ್ರ ಪಕ್ಷವೊಂದು ಅಚ್ಚರಿ ಮೂಡಿಸಿದೆ.

ಈ ಹಿಂದೆ ಎನ್​ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಬಣದಲ್ಲಿದ್ದ ಎಐಎಡಿಎಂಕೆ (ಆಲ್​ ಇಂಡಿಯಾ ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಒಕ್ಕೂಟದಿಂದ ಹೊರಬರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇಂಥದ್ದೊಂದು ನಿರ್ಧಾರವನ್ನು ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಅಂಗೀಕರಿಸಲಾಗಿದೆ. ಇದು ಇಂಡಿಯಾ ಕೂಟದ ವಿರುದ್ಧ ಉಳಿದ ಪಕ್ಷಗಳನ್ನು ಒಟ್ಟುಗೂಡಿಸುತ್ತಿದ್ದ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದಂತಾಗಿದೆ.

ಬಿಜೆಪಿ ಜತೆ ಎಲ್ಲ ಸಂಬಂಧ ಕಟ್​​:ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿರುವ ಎಐಎಡಿಎಂಕೆ ಉಪ ಸಂಯೋಜಕ ಕೆ ಪಿ ಮುನುಸಾಮಿ ಅವರು, ಇಂದಿನಿಂದ ಎಐಎಡಿಎಂಕೆ ಪಕ್ಷವು ಬಿಜೆಪಿ ಮತ್ತು ಅದರ ನೇತೃತ್ವದ ಎನ್‌ಡಿಎ ಜೊತೆಗಿನ ಎಲ್ಲಾ ಸಂಬಂಧವನ್ನು ಮುರಿದುಕೊಂಡಿದೆ. ಈ ನಿರ್ಣಯವನ್ನು ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ತಮಿಳುನಾಡು ರಾಜ್ಯ ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕಿ, ಮಾಜಿ ಸಿಎಂ ಜಯಲಲಿತಾ, ಅಣ್ಣಾ, ಪೆರಿಯಾರ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದನ್ನು ಪಕ್ಷ ಸಂಪೂರ್ಣವಾಗಿ ನಿರಾಕರಿಸುತ್ತದೆ. ಈ ಎಲ್ಲಾ ಆರೋಪಗಳನ್ನು ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ನಾವು ಮುಂದೆ ಜನರ ಬಳಿ ತೆರಳಿ ಕೆಲಸ ಮಾಡಬೇಕು. ಆದ್ದರಿಂದ ಯಾವುದೇ ಆಯ್ಕೆಯಿಲ್ಲದೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ತೃತೀಯ ರಂಗದ ನೇತೃತ್ವ :ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎನ್‌ಡಿಎಯಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಜೊತೆಗೆ 2024ರ ಲೋಕಸಭೆ ಚುನಾವಣೆಗೆ ತೃತೀಯ ರಂಗವನ್ನು ಮುನ್ನಡೆಸುವುದಾಗಿ ತೀರ್ಮಾನಿಸಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಎನ್‌ಡಿಎಯಿಂದ ದೂರ ಸರಿಯಲು ಮತ್ತು ಸಮಾನ ಮನಸ್ಕ ಪಕ್ಷಗಳ ಒಕ್ಕೂಟವನ್ನು ಮುನ್ನಡೆಸಲು ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಮುನುಸಾಮಿ ಹೇಳಿದರು.

ಅಣ್ಣಾಮಲೈ ವಿರುದ್ಧ ಗುಡುಗು:ಡಿಎಂಕೆ, ಎಐಎಡಿಎಂಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನಿರಂತರ ಟೀಕಾಪ್ರಹಾರ ನಡೆಸುತ್ತಿದ್ದು, ಗಂಭೀರ ಭ್ರಷ್ಟಾಚಾರ ಆರೋಪ ಹೊರಿಸಿದ್ದಾರೆ. ಹೀಗಾಗಿ ದ್ರಾವಿಡ ಪಕ್ಷವು ಬಿಜೆಪಿ ಜೊತೆ ಮುನಿಸಿಕೊಂಡಿದೆ. ಕೆ ಅಣ್ಣಾಮಲೈ ವಿರುದ್ಧವೂ ಅಸಮಾಧಾನಗೊಂಡಿರುವುದು ಇದು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ:ಸದ್ಯ ಬಿಜೆಪಿ ಜೊತೆ ಯಾವುದೇ ಮೈತ್ರಿ ಇಲ್ಲ.. ಚುನಾವಣೆ ಸಂದರ್ಭದಲ್ಲಿ ನಿರ್ಧಾರ : ಎಐಎಡಿಎಂಕೆ

Last Updated : Sep 25, 2023, 6:21 PM IST

ABOUT THE AUTHOR

...view details