ಕರ್ನಾಟಕ

karnataka

By

Published : Jan 29, 2022, 12:55 PM IST

ETV Bharat / bharat

ರಾಜ್ಯಸಭಾ ಸದಸ್ಯರು ಹೀಗೆಯೇ ಇರಬೇಕು.. ನೀತಿ ಸಂಹಿತೆ ಬಿಡುಗಡೆ

ಕೆಲವೊಂದು ವೇಳೆ ಮಾತ್ರ ಪ್ರಾಮಾಣಿಕವಾದ ಉಡುಗೊರೆಗಳನ್ನು ರಾಜ್ಯಸಭಾ ಸದಸ್ಯರು ಸ್ವೀಕಾರ ಮಾಡಬಹುದು. ಸದಸ್ಯರು ತಮಗೆ ದೊರೆಯುವ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ನೀತಿ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ..

Ahead of Budget Session, Rajya Sabha releases Code of Conduct for members
ರಾಜ್ಯಸಭಾ ಸದಸ್ಯರು ಹೀಗಿರಬೇಕು: ನೀತಿ ಸಂಹಿತೆ ಬಿಡುಗಡೆ

ನವದೆಹಲಿ :ಬಹುನಿರೀಕ್ಷಿತ ಕೇಂದ್ರ ಬಜೆಟ್ ಅಧಿವೇಶನ ಸಮೀಪಿಸುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದು, ಈ ಅಧಿವೇಶನಕ್ಕೆ ಮುಂಚಿತವಾಗಿ ರಾಜ್ಯಸಭಾ ಕಾರ್ಯಾಲಯ ತನ್ನ ಸಂಸದರಿಗೆ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಿದೆ.

ರಾಜ್ಯಸಭೆಯ ಸದಸ್ಯರು ತಮ್ಮಲ್ಲಿರುವ ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು ಮತ್ತು ಜನರ ಒಳಿತಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ನೀತಿ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.

ಇದರ ಜೊತೆಗೆ ಸಂಸದರು ಸಂವಿಧಾನ, ಕಾನೂನು, ಸಂಸದೀಯ ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರನ್ನು ಗೌರವಿಸಬೇಕು. ಅವರು ಸಂವಿಧಾನದ ಪೀಠಿಕೆಯಲ್ಲಿ ತಿಳಿಸಲಾದ ಆದರ್ಶಗಳನ್ನು ವಾಸ್ತವಕ್ಕೆ ತರಲು ನಿರಂತರವಾಗಿ ಶ್ರಮಿಸಬೇಕು ಎಂದು ನೀತಿ ಸಂಹಿತೆಯಲ್ಲಿ ಹೇಳಲಾಗಿದೆ.

ವೈಯಕ್ತಿಕ ಮತ್ತು ಸಾರ್ವಜನಿಕ ಹಿತಾಸಕ್ತಿ ಸಂಘರ್ಷ ವೇಳೆ :ಸಂಸತ್​ನ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಸದಸ್ಯರು ಸಂಸತ್ತಿಗೆ ಅಪಖ್ಯಾತಿ ತರುವ ಮತ್ತು ಅವರ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ಯಾವುದನ್ನೂ ಮಾಡಬಾರದು. ಜನರ ಯೋಗಕ್ಷೇಮವನ್ನು ಹೆಚ್ಚಿಸಲು ಸಂಸತ್ತಿನ ಸದಸ್ಯರಾಗಿ ತಮ್ಮ ಸ್ಥಾನವನ್ನು ಬಳಸಿಕೊಳ್ಳಬೇಕು.

ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಮತ್ತು ಅವರಿಗಿರುವ ಸಾರ್ವಜನಿಕ ಜವಾಬ್ದಾರಿಯ ನಡುವೆ ಸಂಘರ್ಷವಿದೆ ಎಂದು ಕಂಡುಕೊಂಡರೆ, ತಮ್ಮ ಖಾಸಗಿ ಹಿತಾಸಕ್ತಿಗಳನ್ನು ಸಾರ್ವಜನಿಕ ಸಂಸ್ಥೆಗಳ ಮೂಲಕ ಬಗೆಹರಿಸಿಕೊಳ್ಳಬೇಕು. ಸದಸ್ಯರು ಯಾವಾಗಲೂ ತಮ್ಮ ಖಾಸಗಿ ಆರ್ಥಿಕ ಹಿತಾಸಕ್ತಿಗಳು ಅಥವಾ ಕುಟುಂಬಸ್ಥರ ಹಿತಾಸಕ್ತಿಗಳು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಸಂಘರ್ಷಕ್ಕೆ ಬರದಂತೆ ನೋಡಿಕೊಳ್ಳಬೇಕು.

ಯಾವುದೇ ಸಂಘರ್ಷ ಉದ್ಭವಿಸಿದರೆ, ಸಾರ್ವಜನಿಕ ಹಿತಾಸಕ್ತಿಯ ಆಧಾರದಲ್ಲಿ ಆ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸಬೇಕು ಎಂದು ನೀತಿ ಸಂಹಿತೆಯಲ್ಲಿ ಹೇಳಲಾಗಿದೆ.

ಸದನದಲ್ಲಿ ಹೇಗಿರಬೇಕು?:ಸದನದಲ್ಲಿ ಯಾವುದೇ ನಿರ್ಣಯ ಮಂಡಿಸಲು-ಮಂಡಿಸದಿರಲು, ಮಸೂದೆಯನ್ನು ಮಂಡಿಸಲು-ಮಂಡಿಸದಿರಲು, ಮತ ಹಾಕಲು-ಮತ ಹಾಕದಿರಲು ಯಾವುದೇ ಶುಲ್ಕ, ಸಂಭಾವನೆ ಅಥವಾ ಪ್ರಯೋಜನವನ್ನು ಯಾರಿಂದಲೂ ನಿರೀಕ್ಷೆ ಮಾಡಬಾರದು, ಸ್ವೀಕರಿಸಬಾರದು.

ಪ್ರಶ್ನಿಸುವುದು ಅಥವಾ ಪ್ರಶ್ನೆ ಕೇಳುವುದರಿಂದ ದೂರವಿರುವುದು ಅಥವಾ ಸದನ ಅಥವಾ ಸಂಸದೀಯ ಸಮಿತಿಯ ಚರ್ಚೆಗಳಲ್ಲಿ ಭಾಗವಹಿಸುವುದು ಮುಂತಾದ ಕರ್ತವ್ಯಗಳ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಯಾವುದೇ ಪ್ರಕ್ರಿಯೆಗೆ ಒಳಪಡಬಾರದೆಂದು ನೀತಿ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಮಾಣಿಕ ಉಡುಗೊರೆ ಸ್ವೀಕರಿಸಬಹುದು :ಆದರೂ, ಕೆಲವೊಂದು ವೇಳೆ ಪ್ರಾಮಾಣಿಕವಾದ ಉಡುಗೊರೆಗಳನ್ನು ಸ್ವೀಕಾರ ಮಾಡಬಹುದು. ಅಗ್ಗದ ಸ್ಮರಣಿಕೆಗಳನ್ನು ಸ್ವೀಕಾರ ಮಾಡಬಹುದು ಹಾಗೂ ಸಾಂಪ್ರದಾಯಿಕ ಆತಿಥ್ಯವನ್ನು ಸ್ವೀಕಾರ ಮಾಡಬಹುದು ಎಂದು ನೀತಿ ಸಂಹಿತೆಯಲ್ಲಿ ಹೇಳಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಒಂದು ವೇಳೆ ಸದಸ್ಯರು ರಹಸ್ಯವಾದ ಮಾಹಿತಿಯನ್ನು ಹೊಂದಿದ್ದರೆ, ಆ ಮಾಹಿತಿಯನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬಹಿರಂಗಪಡಿಸಬಾರದು ಎಂಬ ನಿಯಮ ನೀತಿ ಸಂಹಿತೆಯಲ್ಲಿದೆ. ಸದಸ್ಯರು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಪ್ರಮಾಣಪತ್ರಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ನೀತಿ ಸಂಹಿತೆ ಹೇಳುತ್ತದೆ.

ಜಾತ್ಯತೀತ ಮೌಲ್ಯಗಳ ಪ್ರಚಾರ ಮಾಡಬೇಕು : ಸದಸ್ಯರು ತಮಗೆ ದೊರೆಯುವ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಅವರು ಯಾವುದೇ ಧರ್ಮಕ್ಕೆ ಅಗೌರವ ತೋರಬಾರದು ಮತ್ತು ಜಾತ್ಯಾತೀತ ಮೌಲ್ಯಗಳ ಪ್ರಚಾರಕ್ಕಾಗಿ ಕೆಲಸ ಮಾಡಬೇಕು. ಮೂಲಭೂತ ಕರ್ತವ್ಯಗಳನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ನೀತಿ ಸಂಹಿತೆಯಲ್ಲಿ ನಮೂದಿಸಲಾಗಿದೆ.

ಈ ಹಿಂದೆ ರಾಜ್ಯಸಭೆಯ ಹನ್ನೆರಡು ಪ್ರತಿಪಕ್ಷದ ಸದಸ್ಯರನ್ನು ಇಡೀ ಚಳಿಗಾಲದ ಅಧಿವೇಶನಕ್ಕೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಈ ಬಾರಿಯ ಅಧಿವೇಶನದಲ್ಲಿ ರಾಜ್ಯಸಭಾ ಸದಸ್ಯರಿಗೆ ನೀತಿ ಸಂಹಿತೆ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಜೆಟ್‌ ಅಧಿವೇಶನ: ಜ.31, ಫೆ.1 ರಂದು ಎರಡೂ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯ ಅವಧಿ ಇಲ್ಲ

ABOUT THE AUTHOR

...view details