ತಿರುವನಂತಪುರಂ: ದೂರದರ್ಶನ ಟಿವಿ ವಾಹಿನಿಯಲ್ಲಿ ನಡೆಯುತ್ತಿದ್ದ ಲೈವ್ ಟೆಲಿಕಾಸ್ಟ್ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕೃಷಿ ತಜ್ಞರೊಬ್ಬರು ಶುಕ್ರವಾರ ಸಾವನ್ನಪ್ಪಿದ್ದಾರೆ. ಡಾ.ಅನಿ ಎಸ್ ದಾಸ್ (59) ಮೃತರು.
ಕೇರಳ ಕೃಷಿ ವಿಶ್ವವಿದ್ಯಾಲಯದ ಯೋಜನಾ ನಿರ್ದೇಶಕರಾಗಿರುವ ದಾಸ್ ಕೃಷಿ ತಜ್ಞರಾಗಿದ್ದರು. ಕೃಷಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ನೀಡಲು ದೂರದರ್ಶನದಲ್ಲಿ ನಡೆಯುತ್ತಿದ್ದ ಚರ್ಚಾ ಕಾರ್ಯಕ್ರಮಗಳಲ್ಲಿ ಆಗಾಗ ಭಾಗಿಯಾಗುತ್ತಿದ್ದರು. ಶುಕ್ರವಾರ ಕೂಡ ದೂರದರ್ಶನದಲ್ಲಿ ಸಂಜೆ 6.30ಕ್ಕೆ ನಡೆಯುವ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು. ಈ ಕಾರ್ಯಕ್ರಮ ಲೈವ್ ಟೆಲಿಕಾಸ್ಟ್ ಆಗುತ್ತಿತ್ತು. ಈ ವೇಳೆ ಇವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.