ಕರ್ನಾಟಕ

karnataka

By

Published : Jul 29, 2022, 7:27 PM IST

ETV Bharat / bharat

'ರಾಷ್ಟ್ರಪತ್ನಿ' ಹೇಳಿಕೆ: ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್​ ರಂಜನ್​ ಚೌಧರಿ

ರಾಷ್ಟ್ರಪತ್ನಿ ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿರುವ ಕಾಂಗ್ರೆಸ್ ಸಂಸದ ಅದೀರ್ ರಂಜನ್​ ಚೌಧರಿ ಇದೀಗ ಕ್ಷಮೆಯಾಚನೆ ಮಾಡಿದ್ದಾರೆ.

Congress MP Adhir Ranjan Chowdhury
Congress MP Adhir Ranjan Chowdhury

ನವದೆಹಲಿ:ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ರಾಷ್ಟ್ರಪತ್ನಿ” ಎಂದು ಕರೆಯುವ ಮೂಲಕ ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸಂಸದ ಅಧೀರ್​ ರಂಜನ್​ ಚೌಧರಿ ಇದೀಗ ಕ್ಷಮೆಯಾಚನೆ ಮಾಡಿದ್ದಾರೆ. ರಾಷ್ಟ್ರಪತಿಗಳಿಗೆ ಪತ್ರ ಬರೆದು ಕ್ಷಮೆಯಾಚನೆ ಮಾಡಿರುವ ಅಧೀರ್ ರಂಜನ್​ ಚೌಧರಿ, ಮಾತನಾಡುವ ತವಕದಲ್ಲಿ ಈ ಶಬ್ದ ನನ್ನ ಬಾಯಿಂದ ಹೊರಬಂದಿದೆ. ಇದಕ್ಕೋಸ್ಕರ ನಾನು ಕ್ಷಮೆಯಾಚನೆ ಮಾಡುತ್ತೇನೆ. ಜೊತೆಗೆ ನನ್ನ ಕ್ಷಮೆ ಒಪ್ಪಿಕೊಳ್ಳುವಂತೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ನೀವು ಹೊಂದಿರುವ ಸ್ಥಾನದ ಬಗ್ಗೆ ವಿವರಣೆ ನೀಡುತ್ತಿದ್ದ ವೇಳೆ ಬಾಯ್ತಪ್ಪಿನಿಂದಾಗಿ ತಪ್ಪು ಪದ ಬಳಕೆ ಮಾಡಿದ್ದೇನೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿರುವ ಕಾಂಗ್ರೆಸ್ ನಾಯಕ ಅಧೀರ್​ ರಂಜನ್​ ಚೌಧರಿ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಸಂಸದರು ಸಂಸತ್​​ನಲ್ಲಿ ನಿನ್ನೆ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್​​ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರು.

ಇದನ್ನೂ ಓದಿರಿ: 'Don't talk to me,": ಸ್ಮೃತಿ ಇರಾನಿಗೆ ಈ ರೀತಿ ಹೇಳಿದ್ರಾ ಸೋನಿಯಾ ಗಾಂಧಿ!?

ಇದರ ಬೆನ್ನಲ್ಲೇ ಮಾತನಾಡಿದ್ದ ಚೌಧರಿ, ನನ್ನ ಹೇಳಿಕೆಯಿಂದ ಅವರ ಭಾವನೆಗಳಿಗೆ ನೋವಾಗಿದ್ದರೆ ಅವರ ಬಳಿ ಕ್ಷಮೆಯಾಚನೆ ಮಾಡುತ್ತೇನೆ. ಬಾಯ್ತಪ್ಪಿನಿಂದ 'ರಾಷ್ಟ್ರಪತ್ನಿ' ಎಂದು ಹೇಳಿದ್ದೇನೆ. ಆಡಳಿತ ಪಕ್ಷವು ಸಣ್ಣ ಕಲ್ಲನ್ನು ದೊಡ್ಡ ಬೆಟ್ಟವನ್ನಾಗಿ ಮಾಡಲು ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತಿದೆ" ಎಂದಿದ್ದರು.

ಇದೇ ವಿಚಾರವಾಗಿ ಸೋನಿಯಾ ಗಾಂಧಿ ಹೆಸರು ಸಹ ತಳಕು ಹಾಕಿಕೊಂಡಿತ್ತು. ನಿನ್ನೆ ಸದನ ಮುಂದೂಡಿದ ನಂತರ ಅಲ್ಲಿಂದ ಹೊರ ಬಂದ ಸೋನಿಯಾ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದ್ದಾರೆ. ಈ ವೇಳೆ, ಬಿಜೆಪಿ ಸಂಸದೆ ರಮಾದೇವಿ ಬಳಿ ತೆರಳಿ ಇದರಲ್ಲಿ ನನ್ನನ್ನು ಏಕೆ ಎಳೆದು ತರಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾಗಿ ವರದಿಯಾಗಿದೆ. ರಾಷ್ಟ್ರಪತ್ನಿ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಅಧೀರ್​ ರಂಜನ್​ ಚೌಧರಿ ಅವರಿಗೆ ನೋಟಿಸ್ ನೀಡಿ, ಸ್ಪಷ್ಟನೆ ಸಹ ಕೇಳಿದೆ.

ABOUT THE AUTHOR

...view details