ಚಂಡೀಗಢ (ಪಂಜಾಬ್): 15 ವರ್ಷದ ಕಾಫಿ ಎಂಬ ವಿದ್ಯಾರ್ಥಿನಿ ಗುರಿ ಸಾಧಿಸಲು ಅಂಗವೈಕಲ್ಯ ಅಡ್ಡಿಯಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಕಣ್ಣಿನ ದೃಷ್ಟಿ ಕಳೆದುಕೊಂಡರೂ ಇವರು ಓದುವ ಉತ್ಸಾಹ ಕಳೆದುಕೊಳ್ಳಲಿಲ್ಲ. CBSE ಪಠ್ಯಕ್ರಮದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 95.2 ಅಂಕ ಗಳಿಸಿ ತನ್ನ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಸಂಪೂರ್ಣ ವಿವರ: ಹಿಸ್ಸಾರ್ ನಿವಾಸಿ ಪವನ್ ಎಂಬವರ ಮಗಳು ಕಾಫಿ ಚಂಡೀಗಢದ ಇನ್ಸ್ಟಿಟ್ಯೂಟ್ ಆಫ್ ಬ್ಲೈಂಡ್ ವಿದ್ಯಾರ್ಥಿನಿ. ಹುಟ್ಟೂರು ಹಿಸ್ಸಾರ್ನಲ್ಲಿ ಹೋಳಿ ಆಡುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಮೂವರು ದುರುಳರು ಆಕೆಯ ಮೇಲೆ ಆ್ಯಸಿಡ್ ಎರಚಿದ್ದರು. ಮುಖ ತೀವ್ರವಾಗಿ ಸುಟ್ಟು ಹೋಗಿತ್ತು. ಎರಡೂ ಕಣ್ಣುಗಳಿಗೆ ಹಾನಿಯಾಗಿತ್ತು. ಮುಂದಿನ 6 ವರ್ಷ ಕಾಫಿಯ ಪೋಷಕರು ದೆಹಲಿಯ ಏಮ್ಸ್ ಸೇರಿದಂತೆ ಅನೇಕ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ.
ಪವನ್ ಅವರು ಸೆಕ್ರೆಟರಿಯೇಟ್ನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾರೆ. ಮಗಳನ್ನು ಸಿಬಿಎಸ್ಇ ಪಠ್ಯಕ್ರಮ ಶಾಲೆಗೆ ಸೇರಿಸಿದ್ದರು. ವ್ಯಾಸಂಗಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿದ್ದರು. ತಾಯಿ ಸೂಕ್ತ ಬೆಂಬಲ ನೀಡುತ್ತಿದ್ದರು. ಸ್ನೇಹಿತರು, ಶಿಕ್ಷಕರ ಪ್ರೋತ್ಸಾಹ ಸಿಕ್ಕಿದೆ. ಓದಲು ಸಾಧ್ಯವಾಗದು ಎಂಬ ನಿರಾಶೆ ಬಾಲಕಿಯನ್ನು ಎಂದಿಗೂ ಬಾಧಿಸಲಿಲ್ಲ.
"ಆಗ ನನ್ನ ಮಗಳಿಗೆ 3 ವರ್ಷ. ಹೋಳಿ ಹಬ್ಬ ನಡೆಯುತ್ತಿತ್ತು. ನೆರೆಹೊರೆಯವರು ಆ್ಯಸಿಡ್ ದಾಳಿ ಮಾಡಿದ್ದರು. ಆಕೆ ದೃಷ್ಟಿ ಕಳೆದುಕೊಂಡಳು. ದೃಷ್ಟಿ ಮರಳಿ ತರಲು ಸಾಕಷ್ಟು ಪ್ರಯತ್ನಿಸಿದೆವು. ಹಲವು ವರ್ಷ ಅನೇಕ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿದೆವು. ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರು ದೃಷ್ಟಿ ಬರುವುದು ಕಷ್ಟ" ಎಂದು ಹೇಳಿರುವುದಾಗಿ ಪವನ್ ತಿಳಿಸಿದರು.
ಹಲವು ಕಷ್ಟಗಳು ಎದುರಾದವು. ಕೆಲವರ ಸಲಹೆಯಿಂದ ಮಗಳನ್ನು ಇಲ್ಲಿಯವರೆಗೆ ಕಲಿಸಲು ಸಾಧ್ಯವಾಯಿತು. ಪೋಷಕರಿಗೆ ನನ್ನ ಮನವಿ ಒಂದೇ. ಮಕ್ಕಳನ್ನು ನಿರಾಸೆಗೊಳಿಸಬೇಡಿ. ಅವರ ಗುರಿಗಳನ್ನು ಸಾಧಿಸಲು ನೆರವಾಗಿ. ನನ್ನ ಮಗಳಿಗೆ ಐಎಎಸ್ ಆಗಬೇಕೆಂಬ ಆಸೆ ಇದೆ. ಆಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.