ನವದೆಹಲಿ:ಬಿಜೆಪಿ ಸರ್ಕಾರವನ್ನು ಟೀಕಿಸುವ ಆಮ್ ಆದ್ಮಿ ಪಕ್ಷದ ಯುವ ಸಂಸದ ರಾಘವ್ ಚಡ್ಡಾರ ಮೇಲೆ ಸಂಸತ್ತಿನ ಹೊರಗೆ ಕಾಗೆಯೊಂದು ದಾಳಿ ಮಾಡಿದ್ದು, ಅದನ್ನೇ ಬಳಸಿಕೊಂಡಿರುವ ಬಿಜೆಪಿ 'ಸುಳ್ಳು ಹೇಳಿದರೆ ಕಾಗೆ ಕುಕ್ಕುತ್ತೆ' ಎಂದು ವ್ಯಂಗ್ಯ ಮಾಡಿದೆ. ಇದಕ್ಕೆ ವಿರುದ್ಧವಾಗಿ ರಾಮಾಯಣದ ಶ್ರೀರಾಮನ ಹೇಳಿಕೆಯನ್ನು ಪ್ರಸ್ತಾಪಿಸಿ ಚಡ್ಡಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸತ್ತಿನ ಹೊರಗೆ ಹೋಗುತ್ತಿರುವ ವೇಳೆ ಎಎಪಿ ಸಂಸದನ ಮೇಲೆ ಕಾಗೆ ದಾಳಿ ಮಾಡಿ ತಲೆಗೆ ಕುಕ್ಕಿದೆ. ಇದರ ಚಿತ್ರಗಳನ್ನು ಕೊಲಾಜ್ ಮಾಡಿರುವ ದೆಹಲಿ ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ 'ಸುಳ್ಳು ಹೇಳಿದರೆ ಕಾಗೆ ಕುಕ್ಕುತ್ತೆ' ಎಂದು ನಾವು ಇಲ್ಲಿಯವರೆಗೆ ಕೇಳಿದ್ದೆವು. ಅದೀಗ ನಿಜವಾಗಿದೆ. ಕಾಗೆ ಸುಳ್ಳುಗಾರನನ್ನು ಕುಕ್ಕಿದ್ದನ್ನು ನೋಡಿದೆವು ಎಂದು ಒಕ್ಕಣೆಯನ್ನು ನೀಡಿದೆ.
ಈ ಚಿತ್ರವನ್ನು ಯಾವಾಗ ತೆಗೆಯಲಾಗಿದೆ ಎಂಬುದು ಗೊತ್ತಾಗಿಲ್ಲವಾದರೂ, ಕಾಗೆಯೊಂದು ಚಡ್ಡಾ ಅವರ ತಲೆಗೆ ಕುಕ್ಕಿ ಹಾರಿ ಹೋಗಿದೆ. ಎಎಪಿ ಸಂಸದ ಮೊಬೈಲ್ ಕರೆ ಮಾಡುತ್ತಾ ಬರುತ್ತಿದ್ದಾಗ ಇದು ನಡೆದಿದೆ. ಅಚಾನಕ್ಕಾಗಿ ನಡೆದ ಘಟನೆಯಿಂದ ಚಡ್ಡಾ ಬೆದರಿದ್ದಾರೆ. ಬಿಜೆಪಿ ಮಾಡಿದ ಈ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕೂಡ ತರಹೇವಾಗಿ ಕಾಮೆಂಟ್ ಮಾಡಿದ್ದಾರೆ.
ಎಎಪಿ ಸಂಸದನ ತಿರುಗೇಟು:ಬಿಜೆಪಿಯ ಈ ಲೇವಡಿ ಟ್ವೀಟ್ ಅನ್ನು ರೀಟ್ವೀಟ್ ಮಾಡಿಕೊಂಡಿರುವ ಎಎಪಿ ಸಂಸದ ರಾಘವ್ ಚಡ್ಡಾ ರಾಮಾಯಣದ ಪ್ರಸಂಗವನ್ನು ಪ್ರಸ್ತಾಪಿಸಿ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದಾರೆ. ರಾಮಾಯಣದಲ್ಲಿ ಶ್ರೀರಾಮಚಂದ್ರ ಸೀತೆಗೆ 'ಮುಂದೊಂದು ದಿನ ಹಂಸವು ಧಾನ್ಯವನ್ನು ತಿನ್ನುತ್ತದೆ, ಕಾಗೆ ಮುತ್ತುಗಳನ್ನು ಸವಿಯುತ್ತದೆ' ಅಂದಿದ್ದರು. ಅದನ್ನು ನಾನು ಇದುವರೆಗೂ ಬರೀ ಕೇಳಿಸಿಕೊಂಡಿದ್ದೆ. ಈಗ ನೋಡಿದೆ ಎಂದು ಬರೆದುಕೊಂಡಿದ್ದಾರೆ.
ಕಾಗೆ ಶಕುನದ ಸಂಕೇತ:ಭಾರತೀಯ ಸಂಪ್ರದಾಯದಲ್ಲಿ ಕಾಗೆ ಅಪಶಕುನದ ಸಂಕೇತ. ಶನಿಯ ವಾಹನವಾಗಿರುವ ಕಾಗೆಯು ಮನೆಯ ಪಕ್ಕದಲ್ಲಿ ಕೂಗಿದರೂ, ಅಪಶಕುನ ಎಂದು ಗದರಿಸಿ ಓಡಿಸುತ್ತೇವೆ. ಚಡ್ಡಾ ಅವರ ತಲೆಗೆ ಕುಕ್ಕಿದ ಕಾರಣ ಹಲವು ನೆಟ್ಟಿಗರು ಈ ಬಗ್ಗೆ ಆತಂಕದ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಇನ್ನು, ಎಎಪಿ ಸಂಸದ ಚಡ್ಡಾ ಅವರು ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಅವರೊಂದಿಗೆ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಅಕ್ಕೋಬರ್ 28 ಮತ್ತು 29ರಂದು ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಬಳಿಕ ಅವರಿಬ್ಬರ ಆರತಕ್ಷತೆ ಕಾರ್ಯಕ್ರಮವು ಚಂಡೀಗಢ ಮತ್ತು ಮುಂಬೈನಲ್ಲಿ ಆಯೋಜಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ;ಅಮೆರಿಕಕ್ಕೆ ಓದಲು ಹೋಗಿದ್ದ ಹೈದರಾಬಾದ್ ಯುವತಿ ಬೀದಿಪಾಲು.. ವಾಪಸ್ ಕರೆತರಲು ಕೋರಿ ವಿದೇಶಾಂಗ ಸಚಿವರಿಗೆ ಪತ್ರ ಬರೆದ ತಾಯಿ