ಕರ್ನಾಟಕ

karnataka

ETV Bharat / bharat

ಮದ್ಯದ ಹೊಳೆ ಬಾಡೂಟದ ಘಮ.. ತೇಲಾಡಿದ ಕುಡುಕರು: ಕೋಟಿ ಕೋಟಿ ವಹಿವಾಟು.. ಇದು ಬೈಎಲೆಕ್ಷನ್ ಸೌಭಾಗ್ಯ !

ಮುನುಗೋಡು ಉಪಚುನಾವಣೆ: ಅಬಕಾರಿ ಇಲಾಖೆಯ ಅಂಕಿ - ಅಂಶಗಳ ಪ್ರಕಾರ ಮುನುಗೋಡದಲ್ಲಿ ಅತಿ ಹೆಚ್ಚು ಹಾಗೂ ಗಟ್ಟುಪ್ಪಲಿಯಲ್ಲಿ ಅತಿ ಕಡಿಮೆ ಮದ್ಯ ಮಾರಾಟವಾಗಿದೆ. ಮತ್ತೊಂದೆಡೆ ಹೊರ ಪ್ರದೇಶಗಳಿಂದಲೂ ಮದ್ಯ ಬರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

By

Published : Oct 26, 2022, 12:56 PM IST

Updated : Oct 26, 2022, 1:06 PM IST

ಮದ್ಯದ ಹೊಳೆ, ಬಾಡೂಟದ ಘಮ.. ತೇಲಾಡಿದ ಕುಡುಕರು: ಮುನುಗೋಡು ಬೈಎಲೆಕ್ಷನ್ ಸೌಭಾಗ್ಯ !
ಮದ್ಯದ ಹೊಳೆ ಬಾಡೂಟದ ಘಮ.. ತೇಲಾಡಿದ ಕುಡುಕರು: ಕೋಟಿ ಕೋಟಿ ವಹಿವಾಟು.. ಇದು ಬೈಎಲೆಕ್ಷನ್ ಸೌಭಾಗ್ಯ !

ನಲ್ಗೊಂಡ( ತೆಲಂಗಾಣ): ಮುನುಗೋಡು ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಸಾರಾಯಿ ನದಿಯಂತೆ ಹರಿಯುತ್ತಿದೆ. ಪ್ರತಿದಿನ ಸಾವಿರಾರು ಕೋಳಿ ಮತ್ತು ಮೇಕೆಗಳನ್ನು ಕತ್ತರಿಸಿ ಬಾಡೂಟ ಏರ್ಪಡಿಸಲಾಗುತ್ತಿದೆ. ಕುಡುಕರು ನಶೆಯಲ್ಲಿ ತೇಲಾಡುತ್ತಿದ್ದರೆ, ಹಸಿದವರು ಹೊಟ್ಟೆ ತುಂಬಾ ಉಂಡು ತೇಗುತ್ತಿದ್ದಾರೆ.

ಅಬಕಾರಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಕ್ಷೇತ್ರದ ಏಳು ಮಂಡಲಗಳಲ್ಲಿ ಅಕ್ಟೋಬರ್ ತಿಂಗಳಿನ 22 ದಿನಗಳಲ್ಲಿ 160.8 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ತಿಂಗಳಾಂತ್ಯಕ್ಕೆ 230 ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ. ಈ ಹಿಂದೆ ನಲ್ಗೊಂಡ ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 132 ಕೋಟಿ ರೂ.ಗಳ ಮದ್ಯ ಮಾರಾಟವಾಗುತ್ತಿತ್ತು. ಪ್ರಸ್ತುತ ಅದು ದ್ವಿಗುಣವಾಗುವ ಸಾಧ್ಯತೆಗಳಿವೆ.

ಅಬಕಾರಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮುನುಗೋಡದಲ್ಲಿ ಅತಿ ಹೆಚ್ಚು ಹಾಗೂ ಗಟ್ಟುಪ್ಪಲಿಯಲ್ಲಿ ಅತಿ ಕಡಿಮೆ ಮದ್ಯ ಮಾರಾಟವಾಗಿದೆ. ಮತ್ತೊಂದೆಡೆ ಹೊರ ಪ್ರದೇಶಗಳಿಂದಲೂ ಮದ್ಯ ಬರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೈದರಾಬಾದ್, ಇಬ್ರಾಹಿಂಪಟ್ಟಣ, ದೇವರಕೊಂಡ ಸುತ್ತಮುತ್ತಲಿನ ಪ್ರದೇಶಗಳಿಂದ ಕ್ಷೇತ್ರದ ಬೆಲ್ಟ್ ಶಾಪ್‌ಗಳಿಗೆ ಮದ್ಯ ಪೂರೈಕೆಯಾಗುತ್ತಿದೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ಮೇಲಧಿಕಾರಿಗಳಿಗೂ ದೂರುಗಳು ಬರುತ್ತಿವೆ. ಚುನಾವಣಾ ವೀಕ್ಷಕರ ಆದೇಶದ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿನಯ್ ಕೃಷ್ಣಾ ರೆಡ್ಡಿ ಮಂಗಳವಾರ ಮದ್ಯದಂಗಡಿಗಳಲ್ಲಿ ಪರಿಶೀಲನೆ ನಡೆಸಿದರು.

ಚಿಲ್ಲರೆ ನೋಟುಗಳಿಗೆ ಚೌಕಾಸಿ: ಪ್ರಚಾರದ ವೇಳೆ ಮುಖಂಡರು ಹಾಗೂ ವ್ಯಾಪಾರಿಗಳು ಸಣ್ಣ ನೋಟುಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲ ಪಕ್ಷಗಳು 500 ರೂಪಾಯಿ ನೋಟುಗಳ ಮೂಲಕ ಹಣ ಪಾವತಿ ಮಾಡುತ್ತಿರುವುದರಿಂದ ಚಿಲ್ಲರೆ ನೋಟುಗಳ ಕೊರತೆ ಎದುರಾಗಿದೆ. ಎಲ್ಲಿಯೂ ಸಣ್ಣ ನೋಟುಗಳು ಕಾಣುತ್ತಿಲ್ಲ. ಆದರೆ, ಡಿಜಿಟಲ್ ಪಾವತಿಗೆ ಮಾತ್ರ ಯಾವುದೇ ಪಕ್ಷಗಳು ಒಪ್ಪುತ್ತಿಲ್ಲ ಎನ್ನುತ್ತಾರೆ ನಾಂಪಲ್ಲಿಯ ದಿನಸಿ ವ್ಯಾಪಾರಿಯೊಬ್ಬರು.

ಇತರ ಪ್ರದೇಶಗಳ ಯುವಕರ ಆಗಮನ: ಪ್ರಮುಖ ಪಕ್ಷವೊಂದು ವಿವಿಧ ಪ್ರದೇಶಗಳ 20 ರಿಂದ 30 ವರ್ಷದ ಯುವಕರನ್ನು ಕರೆದುಕೊಂಡು ಬಂದಿರುವುದು ಗೊತ್ತಾಗಿದೆ. ಆಂಧ್ರ ಮತ್ತು ರಾಯಲಸೀಮಾದಿಂದ ಹೈದರಾಬಾದ್‌ಗೆ ಬರುವ ರೈಲುಗಳಲ್ಲಿ ಪ್ರತಿದಿನ 200 ಯುವಕರು ನಲ್ಗೊಂಡ ನಿಲ್ದಾಣದಲ್ಲಿ ಇಳಿಯುತ್ತಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಇವರಿಗೆ ಪ್ರತಿದಿನ 500 ರೂಪಾಯಿ ನಗದು ಮತ್ತು ಎರಡು ಊಟ ನೀಡಲಾಗುತ್ತದೆ.

50 ಕೋಟಿ ರೂಪಾಯಿ ಮೌಲ್ಯದ ಮಾಂಸ ಮಾರಾಟ: ಕ್ಷೇತ್ರದಲ್ಲಿ ನಿಯೋಜನೆಗೊಂಡಿರುವ ಮುಖಂಡರು ಹಾಗೂ ಕಾರ್ಯಕರ್ತರಿಗೆ ಎರಡು ಹೊತ್ತಿನ ಊಟಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಮಾಂಸಾಹಾರ ಸೇವನೆ ಗರಿಷ್ಠ ಮಟ್ಟ ತಲುಪಿದೆ. ಮಾಂಸದೂಟಕ್ಕಾಗಿ ಇದುವರೆಗೆ ಪ್ರಮುಖ ಪಕ್ಷಗಳು 50 ಕೋಟಿಗೂ ಹೆಚ್ಚು ಖರ್ಚು ಮಾಡಿವೆ ಎಂದು ಅಂದಾಜಿಸಲಾಗಿದೆ. ಚಿಲ್ಲರೆ ಮತ್ತು ಸಗಟು ಅಂಗಡಿಗಳಲ್ಲಿ ನಾಲ್ಕೈದು ಪಟ್ಟು ವ್ಯಾಪಾರ ಹೆಚ್ಚಾಗಿದೆ.

ಹಿಂದೆ ದಿನಕ್ಕೆ 50 ಕೆಜಿ ಕೋಳಿ ಮಾರಾಟ ಮಾಡುತ್ತಿದ್ದೆ. ಸದ್ಯ 200 ಕೆಜಿಗೆ ಬೇಡಿಕೆ ಇದೆ. ಇನ್ನೂ 200 ಕೆಜಿ ಆರ್ಡರ್ ಮೂಲಕ ಹಳ್ಳಿಗಳಿಗೆ ಸರಬರಾಜು ಮಾಡುತ್ತಿದ್ದೇನೆ. ಉಪಚುನಾವಣೆಯಿಂದ ನಮ್ಮ ವ್ಯಾಪಾರ ಜೋರಾಗಿದೆ ಎಂದು ಮುನುಗೋಡು ಪ್ರದೇಶದ ಮಾಂಸದಂಗಡಿಯವರೊಬ್ಬರು ಹೇಳಿದರು.

ಇದನ್ನೂ ಓದಿ: ಮುನುಗೋಡು ಬೈಎಲೆಕ್ಷನ್ :​ ಕುರುಡು ಕಾಂಚಾಣದ್ದೇ ಸದ್ದು

Last Updated : Oct 26, 2022, 1:06 PM IST

ABOUT THE AUTHOR

...view details