ಕರ್ನಾಟಕ

karnataka

ETV Bharat / bharat

ಬಿಬಿಸಿ ಸಾಕ್ಷ್ಯಚಿತ್ರ ಟೀಕಿಸಿದ್ದ ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್​ಗೆ ರಾಜೀನಾಮೆ - 2002 Gujarat riots controversial documentary

ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್​ ಆ್ಯಂಟನಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆಯಷ್ಟೇ ಅವರು ಮೋದಿ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದರು.

A K Antonys son quits congress
ಎಕೆ ಆ್ಯಂಟನಿ ಪುತ್ರ ಕಾಂಗ್ರೆಸ್​ಗೆ ರಾಜೀನಾಮೆ

By

Published : Jan 25, 2023, 10:19 AM IST

Updated : Jan 25, 2023, 10:51 AM IST

ತಿರುವನಂತಪುರಂ (ಕೇರಳ):ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಗಲಭೆಯ ಕುರಿತಾದಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸುವುದನ್ನು ವಿರೋಧಿಸಿದ್ದ ಕೇಂದ್ರದ ಮಾಜಿ ರಕ್ಷಣಾ ಸಚಿವ, ಹಿರಿಯ ನಾಯಕ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಕೆ.ಆ್ಯಂಟನಿ ಇಂದು ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸಾಕ್ಷ್ಯಚಿತ್ರವನ್ನು ಟೀಕಿಸಿದ ಒಂದು ದಿನದ ನಂತರ ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, "ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವ ಸಾಕ್ಷ್ಯಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ಪಕ್ಷದಲ್ಲೇ ಟೀಕೆಗೆ ಗುರಿಯಾಗಿದ್ದೇನೆ. ನನಗೆ ಹಲವಾರು ನಿಂದನಾತ್ಮಕ ಕರೆಗಳು ಬಂದಿವೆ. ನಾನು ಎಲ್ಲಿಯೇ ಇದ್ದರೂ ಜೀವನ ಮುಂದುವರಿಯುತ್ತದೆ. ಕಾಂಗ್ರೆಸ್​ನ ಎಲ್ಲ ಜವಾಬ್ದಾರಿಗಳಿಗೆ ನಾನು ರಾಜೀನಾಮೆ ನೀಡಿದ್ದೇನೆ"​ ಎಂದು ಪತ್ರದ ಸಮೇತ ಬರೆದುಕೊಂಡಿದ್ದಾರೆ. ಅನಿಲ್ ಆ್ಯಂಟನಿ ಕೆಪಿಸಿಸಿ ಡಿಜಿಟಲ್ ಮೀಡಿಯಾದ ಸಂಚಾಲಕ ಮತ್ತು ರಾಷ್ಟ್ರೀಯ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು.

ಇದು ಅನಿಲ್​ ಆ್ಯಂಟನಿ ಮಾಡಿದ ಟ್ವೀಟ್:ಬಿಬಿಸಿ ಚಿತ್ರಿಸಿದ ವಿವಾದಿತ ಸಾಕ್ಷ್ಯಚಿತ್ರವನ್ನು ದೇಶದಲ್ಲಿ ಪ್ರದರ್ಶಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದನ್ನು ಬೆಂಬಲಿಸಿದ್ದ ಅನಿಲ್​ ಆ್ಯಂಟನಿ ಅವರು ಟ್ವೀಟ್​ ಮಾಡಿ ಪ್ರದರ್ಶನ ಮಾಡಬಾರದು ಎಂದು ಹೇಳಿದ್ದರು. "ಬಿಜೆಪಿಯೊಂದಿಗೆ ನಮಗೆ ದೊಡ್ಡ ಭಿನ್ನಾಭಿಪ್ರಾಯವಿದೆ. ಆದರೆ, ಭಾರತದ ಸಂಸ್ಥೆಗಳ ಮೇಲೆ ಬ್ರಿಟನ್​ನ ಮಾಧ್ಯಮವೊಂದು ಅಭಿಪ್ರಾಯ ರೂಪಿಸುವುದನ್ನು ಒಪ್ಪಲಾಗದು. ಅದು ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ. ಬಿಬಿಸಿ ಮಾಧ್ಯಮದ ಅಭಿಪ್ರಾಯ, ಸಾಕ್ಷ್ಯಚಿತ್ರದ ರೂವಾರಿ, ಬ್ರಿಟನ್​ ವಿದೇಶಾಂಗ ಸಚಿವ ಜಾಕ್​ ಸ್ಟ್ರಾ ಅವರ ನಿಲುವು ಬೆಂಬಲಿಸುವುದು ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ" ಎಂದು ಟ್ವೀಟ್​ನಲ್ಲಿ ಹೇಳಿದ್ದರು.

ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ನಾಯಕ ರಾಹುಲ್​ ಗಾಂಧಿ ಸೇರಿದಂತೆ, ಪಕ್ಷವೇ ಒಪ್ಪಿ ಬೆಂಬಲದ ಹೇಳಿಕೆ ನೀಡಿದೆ. ಆದರೆ, ಕೇಂದ್ರದ ಮಾಜಿ ರಕ್ಷಣಾ ಸಚಿವರ ಪುತ್ರರಾದ ಅನಿಲ್​ ಆ್ಯಂಟನಿ ನೀಡಿದ ಈ ಹೇಳಿಕೆ ಪಕ್ಷದ ನಿಲುವಿನ ವಿರುದ್ಧವಾಗಿದೆ. "ಅನಿಲ್​ ಆ್ಯಂಟನಿ ಪ್ರಧಾನಿ ಮೋದಿಯ ಚಮಚಾ" ಎಂದು ಕಟುವಾಗಿ ಟೀಕಿಸಲಾಗಿದೆ. ಪಕ್ಷದ ಹಿರಿಯ ನಾಯಕರ ಪುತ್ರನ ಹೇಳಿಕೆಗೆ ಕೇರಳದಲ್ಲಿ ಭಾರಿ ವಿರೋಧ ಕೂಡ ವ್ಯಕ್ತವಾಗಿದೆ.

ಕೇರಳದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಜ್ಜು:ಗಣರಾಜ್ಯೋತ್ಸವ ದಿನದಂದು 2002ರ ಗುಜರಾತ್ ಗಲಭೆ ಮತ್ತು ಪ್ರಧಾನಿ ಮೋದಿ ಕುರಿತ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಅಲ್ಪಸಂಖ್ಯಾತರ ಘಟಕ ಮುಂದಾಗಿದೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಸೂಚನೆಗಳನ್ನೂ ಧಿಕ್ಕರಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ಕಾಂಗ್ರೆಸ್​ ತೀರ್ಮಾನಿಸಿದೆ. ಬಿಬಿಸಿ ಸಾಕ್ಷ್ಯಚಿತ್ರವು ಪಕ್ಷಪಾತಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಜನರು ನಿರ್ಧರಿಸಬೇಕು. ಹೀಗಾಗಿ ಅದನ್ನು ಪ್ರದರ್ಶಿಸಲಾಗುವುದು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪಾತ್ರದ ಬಗ್ಗೆ ಬಿಬಿಸಿ ಸಿದ್ಧಪಡಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್​' ಎಂಬ ಸಾಕ್ಷ್ಯಚಿತ್ರದ ಪ್ರಸಾರವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಯಾವುದೇ ಕ್ಲಿಪ್‌ಗಳನ್ನು ಹಂಚಿಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಸಾಕ್ಷ್ಯಚಿತ್ರದ ಬಗ್ಗೆ ಬಿಜೆಪಿ ವಾದವೇನು?:2002 ರ ಗುಜರಾತ್ ಗಲಭೆಗೆ ಸಂಬಂಧಿಸಿದ ಅಂಶಗಳನ್ನು ತನಿಖೆಯ ಆಧಾರದ ಮೇಲೆ ಚಿತ್ರಿಸಲಾಗಿದೆ ಎಂದು ಬಿಬಿಸಿ ತನ್ನ ಸಾಕ್ಷ್ಯಚಿತ್ರವನ್ನು ಸಮರ್ಥಿಸಿಕೊಂಡಿದೆ. ಆದರೆ, ಇದನ್ನು ಬಿಜೆಪಿ ಸಾರಾಸಗಟಾಗಿ ವಿರೋಧಿಸಿದೆ. ಇದೊಂದು ಪ್ರಚಾರದ ಮತ್ತು ಸುಳ್ಳು ಮಾಹಿತಿಯ ಚಿತ್ರ. ವಸ್ತುನಿಷ್ಠತೆಯ ಕೊರತೆ, ಪೂರ್ವಾಗ್ರಹಪೀಡಿತ ಎಂದು ಟೀಕಿಸಿದೆ.

ಇದನ್ನೂ ಓದಿ:ಜೆಎನ್​ಯುನಲ್ಲಿ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಕಲ್ಲು ತೂರಾಟ: ಆರೋಪ

Last Updated : Jan 25, 2023, 10:51 AM IST

ABOUT THE AUTHOR

...view details