ನವದೆಹಲಿ:ದೇಶಾದ್ಯಂತ ಇಂದು 73ನೇ ಗಣರಾಜ್ಯೋತ್ಸವ ಆಚರಣೆ ಸಂಭ್ರಮ ಮನೆಮಾಡಿದೆ. 1949ರ ನವೆಂಬರ್ 26ರಂದು ರಚಿಸಲಾದ ದೇಶದ ಸಂವಿಧಾನವನ್ನು 1950ರ ಜನವರಿ 26ರಂದು ಅಂಗೀಕರಿಸಲಾಯಿತು. ಈ ದಿನವನ್ನು ದೇಶದ ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
ಭಾರತದ ಗಣರಾಜ್ಯೋತ್ಸವವು ಕೇವಲ ಆಚರಣೆಯಾಗಿರದೆ, ಅದು ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ಈ ಬಾರಿ ಮಹಾಮಾರಿ ಕೊರೊನಾ ನಡುವೆಯೂ ಗಣತಂತ್ರ ದಿನದ ಆಚರಣೆಗೆ ಇಡೀ ದೇಶ ಸನ್ನದ್ಧವಾಗಿದೆ. ಈ ದಿನದ ಇಂದು ಭಾರತೀಯ ಸೇನಾ ಪಡೆಗಳು ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಉತ್ಸಾಹ ಪ್ರದರ್ಶನ ನಡೆಯುತ್ತದೆ.
ಡಿಜಿಟಲ್ ನೋಂದಣಿ:ದೇಶದಲ್ಲಿ ಕೋವಿಡ್ ಅಬ್ಬರ ಜೋರಾಗಿರುವ ಕಾರಣ ನವದೆಹಲಿಯ ರಾಜಪಥ್ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ವೀಕ್ಷಣೆಗೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ರಾಜಪಥ್ನಲ್ಲಿ ಗಣರಾಜ್ಯೋತ್ಸವ ವೀಕ್ಷಿಸಲು ಆಸನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಅಲ್ಲದೆ ಸಾಂಕ್ರಾಮಿಕದ ಕಾರಣದಿಂದ ಈ ವರ್ಷವೂ ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನ ನೀಡಿಲ್ಲ.
ಪರೇಡ್ ಸಮಯ ಬದಲಾವಣೆ:ಪ್ರತಿ ವರ್ಷ ರಾಜಪಥ್ನಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆಗೆ ಪರೇಡ್ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಪರೇಡ್ ಕಾರ್ಯಕ್ರಮ 10:30ಕ್ಕೆ ಆರಂಭಗೊಳ್ಳಲಿದೆ. ಪರೇಡ್ ಪ್ರಾರಂಭವಾಗುವ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಶಹೀದೋಂ ಕೋ ಶತ ಶತ ನಮನ ಕಾರ್ಯಕ್ರಮ ಹೊಸದಾಗಿ ನಡೆಯಲಿದ್ದು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಇದನ್ನ ನಡೆಸಿಕೊಡಲಿದೆ. ಇದರ ಜೊತೆಗೆ ಭಾರತೀಯ ವಾಯುಪಡೆಯ 75 ವಿಮಾನಗಳಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರಮುಖವಾಗಿ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 480 ನೃತ್ಯಗಾರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ.
ಕೋವಿಡ್ ಸುರಕ್ಷತೆಗೆ ಆದ್ಯತೆ:ಪರೇಡ್ನಲ್ಲಿ ಭಾಗಿಯಾಗಲಿರುವ ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಎರಡು ಡೋಸ್ ಪಡೆದ ವಯಸ್ಕರು ಮತ್ತು ಒಂದು ಡೋಸ್ ಲಸಿಕೆ ಪಡೆದ 15 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ 15 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೆ ಅನುಮತಿ ನೀಡಿಲ್ಲ. ಪರೇಡ್ ವೇಳೆ ಸಾಮಾಜಿಕ ಅಂತರದೊಂದಿಗೆ ಎಲ್ಲ ಕೋವಿಡ್ ನಿಯಮ ಪಾಲನೆ ಮಾಡುವುದು ಹಾಗೂ ಮಾಸ್ಕ್ ಬಳಕೆ ಕಡ್ಡಾಯವಾಗಿದೆ.
ಶಹೀದೋಂ ಕೋ ಶತ ಶತ ನಮನ ಕಾರ್ಯಕ್ರಮ: ಈ ಸಲದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇಶ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೋಸ್ಕರ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಹೀದೋಂ ಕೋ ಶತ ಶತ ನಮನ ಎಂಬ ಶೀರ್ಷಿಕೆಯಡಿ ಎನ್ಸಿಸಿ ಕೆಡೆಟ್ಗಳಿಗೆ ಕೃತಜ್ಞತಾ ಫಲಕ ನೀಡಲಾಗುವುದು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ.
ಕಲಾ ಕುಂಭ - ರಾಜಪಥದಲ್ಲಿ ಸ್ಕ್ರಾಲ್ ಪೇಂಟಿಂಗ್:ಮೆರವಣಿಗೆ ಸಂದರ್ಭದಲ್ಲಿ ರಾಜಪಥದ ರಸ್ತೆ ಉದ್ದಕ್ಕೂ ಕಲಾ ಕುಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕೇಂದ್ರ ರಕ್ಷಣಾ ಮತ್ತು ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ಈ ಕಾರ್ಯಕ್ರಮ ಸಿದ್ಧಪಡಿಸಿವೆ. ಪೇಂಟಿಂಗ್ನಲ್ಲಿ 600ಕ್ಕೂ ಅಧಿಕ ಹೆಸರಾಂತ ಕಲಾವಿದರು ಮತ್ತು ದೇಶದ ಯುವ ಪ್ರತಿಭೆಗಳ ಚಿತ್ರ ಬಿಡಿಸಲಾಗಿದೆ. ಇದರಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆ ಸಹ ಅನಾವರಣಗೊಳ್ಳಲಿದೆ.
ವಂದೇ ಭಾರತಂ ನೃತ್ಯ ಉತ್ಸವ: ಗಣರಾಜ್ಯೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿವಿಧ ರಾಜ್ಯದ 480 ನೃತ್ಯಗಾರರು ವಂದೇ ಭಾರತಂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಕಳೆದ ಎರಡು ತಿಂಗಳಲ್ಲಿ ವಿವಿಧ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಕೊನೆಯದಾಗಿ ಆಯ್ಕೆಯಾಗಿರುವ ಸ್ಪರ್ಧಿಗಳು ಪರೇಡ್ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
ವೀರ ಗಾಥಾ:ಶಾಲಾ ಮಕ್ಕಳಿಂದ ಶೌರ್ಯದ ಕಥೆ.. ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯದ ಸಹಯೋಗದಿಂದ ಆಯೋಜನೆಗೊಂಡಿದ್ದ ವೀರ ಗಾಥಾ(ಕಥೆ) ಸ್ಪರ್ಧೆಯಲ್ಲಿ ಸುಮಾರು 4,800 ಶಾಲೆಗಳಿಂದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದರಲ್ಲಿ ಕವನ, ಪ್ರಬಂಧ, ರೇಖಾಚಿತ್ರ ಸೇರಿದಂತೆ ಅನೇಕ ಸ್ಫೂರ್ತಿದಾಯಕ ಕಥೆ ಬರೆದಿದ್ದರು. ಕೊನೆಯದಾಗಿ 25 ವಿಜೇತರಿಗೆ ಆಯ್ಕೆ ಮಾಡಲಾಗಿದ್ದು, ನಾಳೆ ನಡೆಯುವ ಗಣರಾಜ್ಯೋತ್ಸವದಲ್ಲಿ 10 ಸಾವಿರ ರೂ. ನಗದು ನೀಡಲಾಗುವುದು.
ಕರ್ನಾಟಕದ ಸ್ತಬ್ಧಚಿತ್ರ:ಈ ವರ್ಷದ ಗಣರಾಜ್ಯೋತ್ಸವ ಪರೇಡ್ನಲ್ಲಿ 'ಕರ್ನಾಟಕದ ಸಾಂಪ್ರದಾಯಿಕ ಕರಕುಶಲತೆಯ ತೊಟ್ಟಿಲು' ಸ್ತಬ್ಧಚಿತ್ರವು ಪರೇಡ್ನಲ್ಲಿ ಭಾಗವಹಿಸಲಿದೆ. ಸತತ 13ನೇ ಬಾರಿಗೆ ನಮ್ಮ ಸ್ತಬ್ಧಚಿತ್ರವು ಆಯ್ಕೆಯಾಗಿದೆ. ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ ಆಯ್ಕೆಯಾಗಿದೆ.
ಎಲ್ಇಡಿ ಪರದೆ ವ್ಯವಸ್ಥೆ:ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ 10ಕ್ಕೂ ಅಧಿಕ ಎಲ್ಇಡಿ ಪರದೆ ಆಯೋಜನೆ ಮಾಡಲಾಗಿದ್ದು, ಇದರ ಮೇಲೆ ವಿವಿಧ ರಾಷ್ಟ್ರ ಪ್ರೇಮ ಸಾರುವ ಸಿನಿಮಾ, ಸಶಸ್ತ್ರ ಪಡೆಗಳ ಕಿರುಚಿತ್ರ ಸೇರಿದಂತೆ ಮೆರವಣಿಗೆ ವಿಡಿಯೋ ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಅನೇಕ ಡ್ರೋನ್ಗಳಿಂದ ವಿಶೇಷ ಶೋ ನಡೆಯಲಿವೆ.
ಅಲ್ಲದೆ ಈ ವರ್ಷದ ಗಣರಾಜ್ಯೋತ್ಸವ ಪರೇಡ್ನ್ನು ಡಿಡಿ ನ್ಯೂಸ್ ಮತ್ತು ಅದರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ನೀವು ಲೈವ್ ವೀಕ್ಷಿಸಬಹುದು. ಬಹುತೇಕ ಖಾಸಗಿ ಸುದ್ದಿ ವಾಹಿನಿಗಳು ಗಣರಾಜ್ಯೋತ್ಸವ ಪರೇಡ್ ಅನ್ನು ನೇರ ಪ್ರಸಾರ ಮಾಡಲಿವೆ.
ಇದನ್ನೂ ಓದಿ:ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ