ಪೋಖ್ರಾನ್ (ರಾಜಸ್ಥಾನ): ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಭೂ ಹರಾಜು ಕುರಿತ ಪೋಸ್ಟರ್ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್ನಲ್ಲಿ ರೈತರೊಬ್ಬರ ಫೋಟೋ ಬಳಕೆ ಮಾಡಿದ್ದು, ಈ ಬಗ್ಗೆ ಖುದ್ದು ರೈತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ''ನಾನು ಯಾವುದೇ ಸಾಲ ಪಡೆದಿಲ್ಲ. ನನ್ನ ಜಮೀನನ್ನೂ ಹರಾಜು ಹಾಕಿಲ್ಲ. ನನ್ನ ಅನುಮತಿಯಿಲ್ಲದೆ ಛಾಯಾಚಿತ್ರ ತೆಗೆಯಲಾಗಿದೆ. ನನ್ನ ಮಾನಹಾನಿ ಮಾಡಲಾಗಿದೆ'' ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ, ಸರ್ಕಾರದ ಕೆಲ ನೀತಿಗಳ ವಿರುದ್ಧ 'ರಾಜಸ್ಥಾನ ಸಹಿಸುವುದಿಲ್ಲ' ಎಂಬ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಕೆಲ ದಿನಗಳ ಹಿಂದೆ ರೈತರಿಗೆ ಸಂಬಂಧಿಸಿದ ಪೋಸ್ಟರ್ ಹಾಕಲಾಗಿದೆ. ''19,000 ರೈತರ ಜಮೀನು ಹರಾಜು ಹಾಕುವುದನ್ನು ರಾಜಸ್ಥಾನ ಸಹಿಸುವುದಿಲ್ಲ'' ಎಂಬ ಈ ಪೋಸ್ಟರ್ನಲ್ಲಿ ಜೈಸಲ್ಮೇರ್ ಜಿಲ್ಲೆಯ ರೈತ, 70 ವರ್ಷದ ಮಧುರಾಮ್ ಜೈಪಾಲ್ ಎಂಬವರ ಭಾವಚಿತ್ರವಿದೆ. ಎಲ್ಲೆಡೆ ಈ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಇದೀಗ ಮಧುರಾಮ್ ತನ್ನ ಫೋಟೋ ಬಳಕೆ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.
ರಾಮದೇವ್ರಾ ಗ್ರಾಮದ ಮಧುರಾಮ್, ''ನಾನು 200 ಬಿಘಾ ಭೂಮಿಯ ಮಾಲೀಕ. ನನ್ನ ಜಮೀನನ್ನು ಹರಾಜು ಹಾಕಿಲ್ಲ ಅಥವಾ ಜಮೀನಿನ ಮೇಲೆ ಯಾವುದೇ ಸಾಲವನ್ನೂ ಮಾಡಿಲ್ಲ. ರಾಜ್ಯದ ರೈತರ ಮಾನಹಾನಿ ಮಾಡುವ ಉದ್ದೇಶದಿಂದ ಬಿಜೆಪಿಯವರು ಪೋಸ್ಟರ್ನಲ್ಲಿ ನೀಡಿರುವ ಹೇಳಿಕೆಗಳು ಸಂಪೂರ್ಣ ತಪ್ಪುದಾರಿಗೆಳೆಯುವ ಮತ್ತು ಸುಳ್ಳಿನಿಂದ ಕೂಡಿವೆ'' ಎಂದು ಹೇಳಿದ್ದಾರೆ.