ಕರ್ನಾಟಕ

karnataka

ನಾಳೆಯಿಂದ ಬಜೆಟ್​ ಅಧಿವೇಶನ: ಇಂದು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

By

Published : Jan 30, 2023, 5:36 PM IST

ನಾಳೆಯಿಂದ ಆರಂಭವಾಗಲಿರುವ ಸಂಸತ್​ ಅಧಿವೇಶನ - ಇಂದು ಸರ್ವಪಕ್ಷಗಳ ಸಭೆ - ಪಕ್ಷಗಳಿಗೆ ಸಚಿವ ಪ್ರಹ್ಲಾದ್​​​ ಜೋಶಿ ಆಹ್ವಾನ - ಸುಗಮ ಕಲಾಪಕ್ಕೆ ಸರ್ಕಾರದ ಅರಿಕೆ - ಮೊದಲ ದಿನ ರಾಷ್ಟ್ರಪತಿ ಮುರ್ಮು ಜಂಟಿ ಭಾಷಣ

all-party-meeting-today
ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ:ನಾಳೆಯಿಂದ ಬಜೆಟ್​ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಕ್ಕೂ ಮೊದಲು ಇಂದು ಅವರು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಇದರಲ್ಲಿ ಸುಗಮ ಕಲಾಪಕ್ಕೆ ಸರ್ಕಾರ ವಿಪಕ್ಷಗಳ ಸಹಕಾರವನ್ನು ಕೋರಲಿದೆ. 27 ಪಕ್ಷಗಳ 37 ನಾಯಕರು ಭಾಗಿಯಾಗಲಿದ್ದಾರೆ.

ಜನವರಿ 31 ರಿಂದ ಬಜೆಟ್​ ಅಧಿವೇಶನಕ್ಕೆ ಚಾಲನೆ ಸಿಗಲಿದೆ. ಹೀಗಾಗಿ ಇಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಅವರು ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿರುವ ವಿಷಯಗಳನ್ನೂ ಪ್ರಸ್ತಾಪಿಸಲಿದೆ ಎಂದು ತಿಳಿದುಬಂದಿದೆ. ಅಧಿವೇಶನದ ಭಾಗವಾಗಿ ಸಹಕಾರದ ಕಾರ್ಯತಂತ್ರ ರೂಪಿಸಲು ಎನ್‌ಡಿಎ ನಾಯಕರ ಸಭೆಯೂ ಇಂದೇ ನಡೆಯಲಿದೆ. ಬಜೆಟ್​ ಮತ್ತು ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಗಳ ಬಗ್ಗೆ ಚರ್ಚೆಗಾಗಿ ಈ ಸಭೆ ಆಯೋಜಿಸಲಾಗಿದೆ.

ರಾಷ್ಟ್ರಪತಿ ಮುರ್ಮು ಭಾಷಣ:ಅಧಿವೇಶನದ ಮೊದಲ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಸಂಸತ್​ ಕಲಾಪ ಅಧಿಕೃತ ಚಾಲನೆ ಪಡೆಯಲಿದೆ. ಇದರ ನಂತರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಓದಲಿದ್ದಾರೆ. ಕೇಂದ್ರ ಬಜೆಟ್ 2024 ರ ಲೋಕಸಭೆ ಚುನಾವಣೆಯ ಕೊನೆಯ ಪೂರ್ಣ ಬಜೆಟ್ ಇದಾಗಿರಲಿದೆ.

ಅಧಿವೇಶನದ ಮೊದಲ ಭಾಗ ಜನವರಿ 31 ರಿಂದ ಆರಂಭವಾಗಿ ಫೆಬ್ರವರಿ 13 ರವರೆಗೆ ನಡೆಯಲಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಉತ್ತರದೊಂದಿಗೆ ಮುಕ್ತಾಯಗೊಳ್ಳಲಿದೆ. ಅಲ್ಲದೇ, ಇದೇ ವೇಳೆ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಪಡೆಯಲಾಗುವುದು. ಉಭಯ ಸದನಗಳಲ್ಲಿ ಗಂಭೀರ ಚರ್ಚೆಗಳು ನಡೆಯಲಿವೆ. ವಿವಿಧ ಸಚಿವಾಲಯಗಳ ಅನುದಾನದ ಬೇಡಿಕೆಯನ್ನು ಚರ್ಚಿಸಲು ಸಂಸದೀಯ ಸಮಿತಿಗಳು ಸಣ್ಣ ವಿರಾಮ ಪಡೆದ ಬಳಿಕ ನಡೆಯಲಿರುವ ಅಧಿವೇಶನವಾಗಲಿದೆ.

ಎರಡನೇ ಭಾಗದ ಕಲಾಪಗಳು ಮಾರ್ಚ್ 13 ರಂದು ಆರಂಭವಾಗಲಿದ್ದು, ಏಪ್ರಿಲ್ 6 ರವರೆಗೆ ನಡೆಯಲಿವೆ. ಈ ವೇಳೆ ಅನುದಾನದ ಬೇಡಿಕೆಯ ಮೇಲಿನ ಚರ್ಚೆಯ ನಂತರ, ಬಜೆಟ್​ ಅನ್ನು ಅಂಗೀಕರಿಸಲಾಗುತ್ತದೆ. ಇದಕ್ಕೂ ಮೊದಲು ನಡೆದ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ 9 ಮಸೂದೆಗಳನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದವು. ಈ ಬಾರಿಯೂ ಕೆಲ ಮಸೂದೆಗಳು ಮಂಡನೆಗೆ ಬರಲಿವೆ ಎಂದು ಸರ್ಕಾರ ಹೇಳಿದೆ.

ಬಜೆಟ್​ ಮಂಡನೆಗೂ ಮುನ್ನ ವಿವಿಧ ಬೇಡಿಕೆಗಳು:ಇನ್ನು, ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಪೂರ್ಣಾವಧಿ ಬಜೆಟ್​ ಮಂಡಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ವಯೋವೃದ್ಧರಿಗಾಗಿ ವಿಶೇಷ ಸಚಿವಾಲಯವನ್ನು ಸ್ಥಾಪಿಸಬೇಕು. ಆದಾಯ, ಆರೋಗ್ಯ ಭದ್ರತೆ, ಆರೈಕೆ ವಿಷಯಗಳಲ್ಲಿ ತಕ್ಷಣ ಪರಿಹಾರ ಒದಗಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೇರಿದಂತೆ ಹಲವು ಬೇಡಿಕೆಗಳು ಬಂದಿವೆ.

ಇದಲ್ಲದೇ, ಹಿರಿಯ ಮಹಿಳೆಯರು ಮತ್ತು ಹಿರಿಯ ವಯೋವೃದ್ಧರ ಬಗ್ಗೆ ವಿಶೇಷವಾಗಿ ಗಮನಹರಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಸರ್ಕಾರದ ವಿವಿಧ ಅಂಗಸಂಸ್ಥೆಗಳಲ್ಲಿ ವಯಸ್ಸಾದ ವ್ಯಕ್ತಿಗಳಿಗೆ ಸೂಕ್ತ ಸ್ಥಾನಮಾನ ನೀಡುವುದಕ್ಕೆ ಅಗತ್ಯ ಕ್ರಮಗಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಹೆಲ್ಪ್‌ ಏಜ್ ಇಂಡಿಯಾ ಮನವಿ ಮಾಡಿಕೊಂಡಿದೆ.

ಓದಿ:ಯೂಟ್ಯೂಬ್​​ನಲ್ಲಿ ದಿನಕ್ಕೆ 4 ಕೋಟಿ ಸ್ಟ್ರೀಮಿಂಗ್: ಅಲ್ಕಾ ಯಾಗ್ನಿಕ್ ವಿಶ್ವ ದಾಖಲೆ

ABOUT THE AUTHOR

...view details