ಕರ್ನಾಟಕ

karnataka

22 ನೇ ಕಾರ್ಗಿಲ್​​ ವಿಜಯೋತ್ಸವ.. ಇತಿಹಾಸದತ್ತ ಒಂದು ನೋಟ..!

By

Published : Jul 26, 2021, 6:29 AM IST

1999 ರಲ್ಲಿ ನಡೆದ ಕಾರ್ಗಿಲ್​ ಯುದ್ಧದಲ್ಲಿ ಪಾಕ್​ ಸೇನೆ ಸೋಲಿಸಿ ಭಾರತ ವಿಜಯದ ಪತಾಕೆ ಹಾರಿಸಿದ್ದಕ್ಕೆ ಇಂದಿಗೆ 22 ವರ್ಷ.

22 ನೇ ಕಾರ್ಗಿಲ್​​ ವಿಜಯೋತ್ಸವ
22 ನೇ ಕಾರ್ಗಿಲ್​​ ವಿಜಯೋತ್ಸವ

ನವದೆಹಲಿ: ಇಂದು 22ನೇ ವರ್ಷದ ಕಾರ್ಗಿಲ್‌ ವಿಜಯ ದಿನ. ಈ ಯುದ್ಧವು 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಲೇಹ್‌ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಸೇನೆಯ ಅಧಿಕಾರಿಗಳು ಸೇರಿದಂತೆ 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು.

ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಜುಲೈ 26ರಂದು ’ಆಪರೇಷನ್‌ ವಿಜಯ್‌’ ಯಶಸ್ವಿ ಎಂದು ಘೋಷಿಸಿತು. ಅಂದಿನಿಂದ ಕಾರ್ಗಿಲ್‌ ವಿಜಯೋತ್ಸವ ದಿನ ಆಚರಿಸಲಾಗುತ್ತಿದೆ.

ಮರೆಯಲಾಗದ ಯುದ್ಧ

ಭಾರತದ ಇತಿಹಾಸ ಪುಟದಲ್ಲಿ ಎಂದೂ ಮರೆಯದ ಘಟನೆ ಕಾರ್ಗಿಲ್​ ಯುದ್ಧ. ಭಾರತದಲ್ಲಿ ಒಳನುಸುಳಿದ್ದ ಪಾಕಿಸ್ತಾನಿ ಸೈನಿಕರನ್ನು ಬಗ್ಗುಬಡಿದು, ಟೈಗರ್ ಹಿಲ್ ಮೇಲೆ ಮತ್ತೆ ತ್ರಿವರ್ಣ ಧ್ವಜ ನೆಟ್ಟ ನಮ್ಮ ಯೋಧರ ಶೌರ್ಯ ಎಂದೆಂದಿಗೂ ಅಮರ. 1999ರ ಮೇನಿಂದ ಜುಲೈ 26ರವರೆಗೆ ಕಾರ್ಗಿಲ್ ಯುದ್ಧ ನಡೆಯಿತು.

ಕುರಿ ಕಾಯುವ ಹುಡುಗನ ಸಮಯ ಪ್ರಜ್ಞೆ

ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆಯನ್ನು ಮೊದಲು ಗುರುತಿಸಿದ್ದು ಓರ್ವ ಕುರಿ ಕಾಯುವ ಹುಡುಗ. ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನದ ಒಳನುಸುಳುವಿಕೆಯನ್ನು ಮೊದಲು ವರದಿ ಮಾಡಿದ್ದು ಸ್ಥಳೀಯ ಕುರಿ ಕಾಯುವ ಹುಡುಗ, ತಾಶಿ ನಮ್‌ಗ್ಯಾಲ್. ಈತ ಕಾಣೆಯಾದ ತನ್ನ ಯಾಕ್​ ಅನ್ನು ಹುಡುಕುತ್ತಿದ್ದ. ಈ ವೇಳೆ, ಪಾಕ್​ ಒಳನುಸುಳುವಿಕೆ ಗಮನಿಸಿದ್ದ. ಈ ಕುರಿತು ಹತ್ತಿರದ ಸೇನೆಗೆ ಮಾಹಿತಿ ನೀಡಿದ್ದನು. ಬಳಿಕ ಇದನ್ನು ಭಾರತೀಯ ಸೈನಿಕರು ಪರಿಶೀಲಿಸಿದಾಗ ಪಾಕ್​ ಸೇನೆ ಒಳನುಸುಳಿರುವುದು ದೃಢವಾಗಿತ್ತು.

ವಿಶ್ವದ ಇತರ ರಾಷ್ಟ್ರಗಳಿಗೂ ಅರಿವಾಯಿತು ಪಾಕ್​ ದುಷ್ಟಬುದ್ಧಿ

ಕಾರ್ಗಿಲ್ ಕದನದಲ್ಲಿ ದುಷ್ಟ ಪಾಕಿಸ್ತಾನ ಸೋತು ಸುಣ್ಣವಾದ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕುತಂತ್ರವನ್ನು ಭಾರತವು ಎಳೆ ಎಳೆಯಾಗಿ ಬಿಚ್ಚಿಡತೊಡಗಿತು. ಭಾರತದ ಸಾರ್ವಭೌಮತೆಯ ಮೇಲೆ ಪಾಕಿಸ್ತಾನವೇ ಅತಿಕ್ರಮಣ ನಡೆಸಿ ಯುದ್ಧ ನಡೆಯಲು ಕಾರಣವಾಗಿದ್ದನ್ನು ವಿಶ್ವದ ಬಹುತೇಕ ದೇಶಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಭಾರತ ಸಂಪೂರ್ಣ ಯಶಸ್ವಿಯಾಯಿತು. ಹೀಗಾಗಿ ಆ ಒಂದು ಕಾಲಘಟ್ಟದಲ್ಲಿ ಪಾಕ್ ತನ್ನ ನೀಚ ಕೃತ್ಯದಿಂದಾಗಿ ಇಡೀ ವಿಶ್ವದಲ್ಲೇ ಒಂಟಿಯಾಗಬೇಕಾಯಿತು. ವಿಶ್ವದ ಎಲ್ಲ ರಾಷ್ಟ್ರಗಳಿಗೂ ಪಾಕಿಸ್ತಾನದ ದುಷ್ಟ ಬುದ್ಧಿಯ ಅರಿವಾಗಿತ್ತು.

ABOUT THE AUTHOR

...view details