ಕರ್ನಾಟಕ

karnataka

ETV Bharat / assembly-elections

ಹೆಬ್ಬಾರ್- ಪಾಟೀಲ್ ನಡುವೆ ಪೈಪೋಟಿ; ಕುತೂಹಲ ಹೆಚ್ಚಿಸುತ್ತಿರುವ ಯಲ್ಲಾಪುರ ಮತಕ್ಷೇತ್ರ

ಯಲ್ಲಾಪುರ ಮತಕ್ಷೇತ್ರ ಚುನಾವಣಾ ಕದನವಾಗಿ ರೂಪಗೊಂಡಿದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ಇದೆ. ಇದರ ಮಧ್ಯೆ ಜೆಡಿಎಸ್​ ಕೂಡ ಪ್ರಾಬಲ್ಯ ಸಾಧಿಸುವ ತಂತ್ರ ಹೆಣೆದಿದೆ. ಕಾಂಗ್ರೆಸ್​ನಿಂದ ಅಭ್ಯರ್ಥಿ ಘೋಷಣೆಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್​ ಕಾದು ನೋಡುವ ಸೂತ್ರದ ಮೊರೆ ಹೋಗಿವೆ. ಹಾಗಾಗಿ ಕ್ಷೇತ್ರ ರಂಗು ಪಡೆದಿದೆ.

By

Published : Apr 8, 2023, 7:19 PM IST

Updated : Apr 8, 2023, 8:05 PM IST

yallapur assembly constituency profile
yallapur assembly constituency profile

ಕಾರವಾರ:ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಚುನಾವಣಾ ಬಿಸಿ ದಿನದಿಂದ ದಿನಕ್ಕೆ ಏರತೋಡಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವುದು ಅಚ್ಚರಿ ವಿಷಯವೇನಲ್ಲ. ಆದರೆ, ಕಣದಲ್ಲಿರುವ ಅಭ್ಯರ್ಥಿಗಳು ಮಾತ್ರ ಅದಲು ಬದಲಾಗಿರುವುದು ಸದ್ಯ ಕ್ಷೇತ್ರದ ವೈಶಿಷ್ಟ್ಯವಾಗಿದೆ. ಇದರ ನಡುವೆ ಜೆಡಿಎಸ್ ಪಾತ್ರವೂ ಮರೆಯುವು.ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು​ ಎಷ್ಟರ ಮಟ್ಟಕ್ಕೆ ಮತದಾರರನ್ನು ಸೆಳೆಯುತ್ತದೆ ಅನ್ನೋದನ್ನು ಕಾದು ನೋಡಬೇಕು.

ಸದ್ಯ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ವಿ.ಎಸ್‌. ಪಾಟೀಲ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಬಿಜೆಪಿಯಲ್ಲಿ ಬಹುತೇಕ ಶಿವರಾಮ್ ಹೆಬ್ಬಾರ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ಕಾರಣದಿಂದ ಎರಡು ಪಕ್ಷಗಳು ತಂತ್ರ ಪ್ರತಿತಂತ್ರಗಳ ಮೂಲಕ ಗೆಲುವಿನ ಲೆಕ್ಕಾಚಾರಕ್ಕೆ ಇಳಿದಿವೆ.

ಅಭ್ಯರ್ಥಿಗಳ ಗೆಲುವಿನ ಅಂತರ

ಕ್ಷೇತ್ರದ ವೈಶಿಷ್ಟ್ಯ:ಕಿತ್ತೂರು-ಕರ್ನಾಟಕ ಪ್ರದೇಶದದಲ್ಲಿರುವ ಈ ಕ್ಷೇತ್ರವು 2008ರಲ್ಲಿ ಉದಯಿಸಿತು. 2008ರ ಕ್ಷೇತ್ರ ಪುನರ್​ ವಿಂಗಡಣೆ ಪ್ರಕಾರ ಇದು ಯಲ್ಲಾಪುರ, ಯಲ್ಲಾಪುರ ತಾಲೂಕು, ಮುಂಡಗೋಡ ತಾಲೂಕು, ಶಿರಸಿ ತಾಲೂಕು (ಭಾಗ), ಬನವಾಸಿ ಸೇರಿದಂತೆ ಹಲವು ನಗರಗಳನ್ನು ಒಳಗೊಂಡಿದೆ. 2019ರಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,72,394 ಮತದಾರರಿದ್ದರು. ಅದರಲ್ಲಿ ಒಟ್ಟು ಮಾನ್ಯ ಮತಗಳ ಸಂಖ್ಯೆ 1,32,139. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅರಬೈಲ್ ಹೆಬ್ಬಾರ್ ಶಿವರಾಮ್ ಅವರು 31408 ಮತಗಳ ಅಂತರದಿಂದ ಗೆದ್ದು ಈ ಕ್ಷೇತ್ರದಿಂದ ಶಾಸಕರಾದರು. ಅವರು ಒಟ್ಟು 80,442 ಮತಗಳನ್ನು ಪಡೆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಒಟ್ಟು 49,034 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಹೆಬ್ಬಾರ್ ಶಿವರಾಮ್

ಜೋರಾದ ಪ್ರಚಾರ ಭರಾಟೆ: ಬಿಜೆಪಿಯಲ್ಲಿದ್ದು ಉಪಚುನಾವಣೆ ವೇಳೆ ಹೆಬ್ಬಾರ್ ಸ್ಪರ್ಧೆಗೆ ಸಹಕಾರ ನೀಡಿದ್ದ ವಿ.ಎಸ್ ಪಾಟೀಲ್ ಅವರಿಗೆ ನೀಡಿದ್ದ ಎನ್​ಡಬ್ಲ್ಯೂಕೆಎಸ್​ಆರ್​ಟಿಸಿ ಅಧ್ಯಕ್ಷ ಸ್ಥಾನವನ್ನು ಎರಡೇ ವರ್ಷಕ್ಕೆ ವಾಪಸ್ ಪಡೆಯಲಾಗಿದೆ. ಅಲ್ಲದೆ ಬಿಜೆಪಿಯಲ್ಲಿ ಕಡೆಗಣನೆ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಸೇರಿರುವ ವಿಎಸ್ ಪಾಟೀಲ್, ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕೂಡ ಕೈಗೊಂಡಿದ್ದು ಬೂತ್ ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅತೃಪ್ತರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಬಿಜೆಪಿಗರ ಸಂಪರ್ಕ ಸಾಧಿಸುತ್ತಿದ್ದು ಅಸಮಾಧಾನಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಇನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕೂಡ ಕ್ಷೇತ್ರದಲ್ಲಿ ತಾವು ಮಾಡಿದಂತಹ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿ ಪರ ಕಾರ್ಯ ಮುಂದಿಟ್ಟುಕೊಂಡು ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಆದರೆ, ಮೂಲ ಬಿಜೆಪಿಗರ ಕಡೆಗಣನೆ ಆರೋಪ ಇದ್ದು ಇದು ಹೆಬ್ಬಾರ್​​ಗೆ ಗೆಲುವಿಗೆ ಕಂಠಕವಾಗುವ ಸಾಧ್ಯತೆ ಇದೆ.

ವಿ.ಎಸ್ ಪಾಟೀಲ್

ಅಭ್ಯರ್ಥಿಗಳು ಅದಲು ಬದಲು:ಈ ಹಿಂದೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ್​ ಇದೀಗ ಕಾಂಗ್ರೆಸ್ ಪಕ್ಷದ ಹುರಿಯಾಳು. ಅಲ್ಲದೇ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಸಚಿವ ಶಿವರಾಮ್ ಹೆಬ್ಬಾರ್,​ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಜಯಗಳಿಸಿದ್ದಲ್ಲದೇ ಸಚಿವರೂ ಆಗಿದ್ದಾರೆ. ಈ ಬಾರಿಯೂ ಅವರು ಬಿಜೆಪಿಯಿಂದ ಕಣಕ್ಕಿಳಿಯುವುದು ಸಂಭವ. ಅಭ್ಯರ್ಥಿಗಳು ಅವರೇ ಆಗಿದ್ದರೂ ಪಕ್ಷಗಳು ಮಾತ್ರ ಅದಲು ಬದಲಾಗಿದ್ದು ಇಬ್ಬರೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಗೊಂದಲದಲ್ಲಿ ಜೆಡಿಎಸ್:ಜೆಡಿಎಸ್‌ನಲ್ಲಿ ಅಭ್ಯರ್ಥಿ ಯಾರೆಂಬುದು ಇನ್ನೂ ನಿಗದಿಯಾಗದಿಲ್ಲ. ಆದರೆ, ಒಂದಡೆ ಸಂತೋಷ ರಾಯ್ಕರ್​ ಎಂಬುವರು ತಾವೇ ಜೆಡಿಎಸ್​ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿರುವುದಾಗಿ ಓಡಾಡಿಕೊಂಡಿದ್ದಾರೆ. ಮತ್ತೊಂದೆಡೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ತಾನು ಕೂಡ ನಿಯೋಜಿತ ಅಭ್ಯರ್ಥಿ ಎಂದು ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರ ನಡೆಸುತ್ತಿರುವುದರಿಂದ ಕರ್ಯಕರ್ತರಲ್ಲೂ ಗೊಂದಲ ಸೃಷ್ಟಿಯಾಗಿದೆ.

ಅಭ್ಯರ್ಥಿಗಳ ಗೆಲುವಿನ ಅಂತರ

ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ:ಬಾರಿಯ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಬಹಳಷ್ಟು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಯಲ್ಲಾಪುರದ ಆನಂದ.ಜಿ. ಭಟ್ ಪಕ್ಷೇತರನಾಗಿ ಸ್ಪರ್ಧೆಗಿಳಿಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಮುಕ್ತ ಅಭಿಯಾನ ಮೂಲಕ ಮತ ಕೇಳಲು ಸಹ ಮುಂದಾಗಿದ್ದಾರೆ. ಇವರಷ್ಟೇ ಅಲ್ಲದೇ ಮುಂಡಗೋಡದ ಕೆಲವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಇನ್ನು ಕ್ಷೇತ್ರದಲ್ಲಿ ಬ್ರಾಹ್ಮಣ, ಲಿಂಗಾಯುತ, ನಾಮದಾರಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಸಮುದಾಯಗಳು ನಿರ್ಣಾಯಕವಾಗಲಿದೆ.

ಸ್ಥಾನವಾರು ಚುನಾವಣೆಗಳ ಮಾಹಿತಿ

ಉಪ ಕದನ ಸೇರಿದಂತೆ ಮೂರು ಚುನಾವಣೆಗಳ ಬಲಾಬಲ: 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವಿ.ಎಸ್ ಪಾಟೀಲ್ 39,109 ಮತ ಪಡೆದು ಗೆಲುವು ಕಂಡಿದ್ದರು. ಇವರ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವರಾಮ್ ಹೆಬ್ಬಾರ್ 36,624 ಮತ ಪಡೆದು ಸೋಲನುಭವಿಸಿದ್ದರು. 2,485 ಮತಗಳ ಅಂತರಗಳಿಂದ ವಿ.ಎಸ್ ಪಾಟೀಲ್ ಗೆಲುವು ದಾಖಲು ಮಾಡಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವರಾಮ್ ಹೆಬ್ಬಾರ್ ಗೆಲ್ಲುವ ಮೂಲಕ ಮುಯ್ಯಿ ತೀರಿಸಿದ್ದರು. ಕಾಂಗ್ರೆಸ್​ನ ಶಿವರಾಮ್ ಹೆಬ್ಬಾರ್ 58,025 ಮತ ಪಡೆದಿದ್ದರೆ ಬಿಜೆಪಿಯ ವಿ.ಎಸ್ ಪಾಟೀಲ್ 33,533 ಮತ ಪಡೆದು ಸೋಲು ಕಂಡಿದ್ದರು. 24,492 ಮತಗಳು ಇವರ ಗೆಲುವಿನ ಅಂತರವಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಮತ್ತೆ ಗೆಲುವಿನ ನಗೆ ಬೀರಿದ್ದರು. 66,290 ಮತ ಪಡೆದ ಕಾಂಗ್ರೆಸ್​ನ ಶಿವರಾಮ್ ಹೆಬ್ಬಾರ್ ಅವರು 64,807 ಮತ ಪಡೆದ ಬಿಜೆಪಿಯ ವಿ.ಎಸ್ ಪಾಟೀಲ್ ವಿರುದ್ಧ ಗೆಲುವು ಕಂಡಿದ್ದರು. ಈ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ 1,483 ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದರು. 2019ರಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದ ಉಪ ಚುನಾವಣೆ ನಡೆಯಿತು. ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಸ್ಪರ್ಧೆ ಮಾಡಿ 31,408 ಮತಗಳ ಅಂತರಗಳಿಂದ ಗೆಲುವು ಕಂಡರು. 49,034 ಮತ ಪಡೆದ ಕಾಂಗ್ರೆಸ್​ನ ಭೀಮಣ್ಣ ನಾಯ್ಕ ಅವರು ಸೋತು ಎರಡನೇ ಸ್ಥಾನಕ್ಕೆ ಕುಸಿದರು. 80,442 ಮತ ಪಡೆದ ಶಿವರಾಮ್ ಹೆಬ್ಬಾರ್ ಬಿಜೆಪಿ ಪಕ್ಷದಿಂದ ಗೆದ್ದು ಸಚಿವರೂ ಆಗಿದ್ದಾರೆ.

ಯಲ್ಲಾಪುರ ಮತಕ್ಷೇತ್ರದ ವಿವರ

ಒಟ್ಟು ಮತದಾರರು:ಯಲ್ಲಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 1,79,474 ಮತದಾರರು ಇದ್ದಾರೆ. ಪುರುಷರು 90,937, ಮಹಿಳೆಯರು 88,537 ಮತದಾರರು ಇದ್ದಾರೆ. ಹೆಬ್ಬಾರ್ ಮತ್ತು ಪಾಟೀಲ್ ಪಕ್ಷ ಬದಲಿಸಿದ್ದರಿಂದ ಪೈಪೋಟಿ ಜೋರಾಗಿದ್ದು ಮತದಾರ ಯಾರಿಗೆ ಮಣೆ ಹಾಕುತ್ತಾನೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಬಿಜೆಪಿಯವರದ್ದು 60-65 ಸೀಟ್ ಅಷ್ಟೇ, ಸೋಲನ್ನು ಒಪ್ಪಿಕೊಳ್ತಿದ್ದಾರೆ: ಡಿ ಕೆ ಶಿವಕುಮಾರ್

Last Updated : Apr 8, 2023, 8:05 PM IST

ABOUT THE AUTHOR

...view details