ಕರ್ನಾಟಕ

karnataka

ಆರೋಗ್ಯ ಇಲಾಖೆ ಕಚೇರಿಗಳಲ್ಲಿ ಜನಪ್ರತಿನಿಧಿಗಳ ಫೋಟೋ ತೆಗೆದುಹಾಕಲು ಸೂಚನೆ

By

Published : Apr 2, 2023, 6:38 AM IST

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಆರೋಗ್ಯ ಹಾಗು ಹಣಕಾಸು ಇಲಾಖೆಗಳಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.

Assembly election
ವಿಧಾನಸಭೆ ಚುನಾವಣೆ

ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಕಚೇರಿಗಳಲ್ಲಿ ಜನಪ್ರತಿನಿಧಿಗಳ ಫೋಟೋಗಳನ್ನು ತೆಗೆಯುವಂತೆ ರಾಜ್ಯ ಚುನಾವಣಾ ಆಯುಕ್ತರು ಆದೇಶಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ಆಯುಕ್ತಾಲಯದ ಕಾರ್ಯಕ್ರಮಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಜನೌಷಧಿ ಕೇಂದ್ರಗಳು ಮತ್ತಿತರ ಕಚೇರಿಗಳಲ್ಲಿ ಅಳವಡಿಸಲಾಗಿರುವ ನಾಮಫಲಕಗಳು, ಫಲಕಗಳು, ಜಾಹೀರಾತುಗಳಲ್ಲಿ ಪ್ರದರ್ಶಿಸಲಾದ ಛಾಯಾಚಿತ್ರಗಳನ್ನು ಕೂಡಲೇ ತೆಗೆಯಬೇಕು. ಆದೇಶವನ್ನು ಕಡ್ಡಾಯವಾಗಿ ಜಿಲ್ಲೆಗಳಲ್ಲಿ ಪಾಲಿಸಬೇಕು. ಇದರ ಹೊಣೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳದ್ದಾಗಿದೆ. ಇಲಾಖೆಯ ಯಾವುದೇ ಐಇಸಿ ಕಾರ್ಯಕ್ರಮಗಳು, ಟೆಂಡರ್ ಪ್ರಕ್ರಿಯೆಗಳು, ವರ್ಗಾವಣೆಗಳು ಇವುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ದೂರಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಪ್ರಸ್ತಾವನೆಗಳು ಸೂಕ್ತ ಸಮರ್ಥನೆಯೊಂದಿಗೆ ಹಾಗೂ ಆಯುಕ್ತಾಲಯದ ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

ಹಣಕಾಸು ಇಲಾಖೆಯಿಂದ ಆದೇಶ:2023-24 ನೇ ಸಾಲಿನ ಬಜೆಟ್‌ನಲ್ಲಿ ಅನಿವಾರ್ಯವಾಗಿ ಹಣ ಬಿಡುಗಡೆ ಮಾಡಬೇಕಿರುವ ಯೋಜನೆಗಳಿಗೆ ಹಣ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆರ್ಥಿಕ ಅಧಿಕಾರ ನೀಡಿ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ. 2023-24 ನೇ ಸಾಲಿನಲ್ಲಿ ಏಪ್ರಿಲ್‌ ರಿಂದ ಜುಲೈವರೆಗೆ ನಾಲ್ಕು ತಿಂಗಳ ಅವಧಿಗೆ ವಿವಿಧ ಕಂತುಗಳಲ್ಲಿ ಹಣ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ, ಯಾವುದೇ ಯೋಜನೆಯಡಿ ಹಣ ಬಿಡುಗಡೆ ಮಾಡುವಾಗ ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆ ಮಾರ್ಗಸೂಚಿ ಗಮನದಲ್ಲಿಡಬೇಕು ಎಂದು ಆರ್ಥಿಕ ಇಲಾಖೆ ಆದೇಶದಲ್ಲಿ ತಿಳಿಸಿದೆ.

10 ಕೋಟಿ ರೂ.ವರೆಗೆ ಅನುಮೋದನೆ:ಕಳೆದ ಆರ್ಥಿಕ ವರ್ಷದಿಂದ ಮುಂದುವರಿದ ಯೋಜನೆಗಳಿಗೆ ಮಾತ್ರ ಹಣ ಬಿಡುಗಡೆಗೊಳಿಸಬಹುದು. ಹೊಸ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುತ್ತದೆ. ಹೀಗಾಗಿ ಹೊಸ ಯೋಜನೆಗಳಿಗೆ ಬಿಡುಗಡೆ ಮಾಡಲು ಅಧಿಕಾರ ಇರುವುದಿಲ್ಲ. ಕಾಮಗಾರಿ ಅಂದಾಜುಗಳ ಅನುಮೋದನೆಗೆ 10 ಕೋಟಿ ರೂ.ವರೆಗೆ ಹಾಗೂ ಸರಕು, ಸೇವೆಗಳ ಸಂಗ್ರಹಣೆಗೆ 10 ಕೋಟಿ ರೂ.ವರೆಗೆ ಆರ್ಥಿಕ ಇಲಾಖೆಯ ಅನುಮೋದನೆ ಇದೆ ಎಂದು ಭಾವಿಸಿ ಕೆಟಿಪಿಪಿ ಷರತ್ತುಗಳೊಂದಿಗೆ ಅನುದಾನ ನೀಡಬಹುದು.

ಬಜೆಟ್‌ನಲ್ಲಿ ಒದಗಿಸಿರುವ 1ನೇ 3 ಭಾಗದಷ್ಟು ಮೊತ್ತ ಏಪ್ರಿಲ್‌ನಿಂದ ಜುಲೈವರೆಗೆ ಒಂದು ಕಂತಿನಲ್ಲಿ ಬಿಡುಗಡೆ ಮಾಡಬಹುದು. ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ಒದಗಿಸಿರುವ ಅನುದಾನದ 3ನೇ 1 ಭಾಗವನ್ನು ಮೊತ್ತವನ್ನು ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿ, ಬಳಿಕ ಬೇಡಿಕೆಯನುಸಾರ ಬಿಡುಗಡೆ ಮಾಡಬೇಕು. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಆಹಾರಧಾನ್ಯ ಒದಗಿಸುವ ಸಹಾಯಧನವನ್ನು ನಾಲ್ಕು ಕಂತುಗಳಲ್ಲಿ ಪಾಗಿಸಬೇಕು ಎಂದು ತಿಳಿಸಲಾಗಿದೆ.

ಲೋಕೋಪಯೋಗಿ ಇಲಾಖೆಯಡಿ ಮುಂದುವರೆದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬೇಕು. ಐಪಿ ಸೆಟ್‌ಗಳಿಗೆ ಸಬ್ಸಿಡಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಯಂತಹ ಯೋಜನೆಗಳಿಗೆ ಸಂಬಂದಪಟ್ಟ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಹಣ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ಹಣ ಬಿಡುಗಡೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ:ಹರಪನಹಳ್ಳಿ ಕ್ಷೇತ್ರ: ಎಂಪಿ ಪ್ರಕಾಶ್ ಪುತ್ರಿಯರಿಂದ ಕರುಣಾಕರ ರೆಡ್ಡಿಗೆ ಟಫ್​ ಫೈಟ್​! ಜೆಡಿಎಸ್​ ಪಾತ್ರ ಹೀಗಿದೆ

ABOUT THE AUTHOR

...view details