ಕರ್ನಾಟಕ

karnataka

ಬೊಂಬೆನಗರಿಯಲ್ಲಿ ಹೇಗಿದೆ ಎಲೆಕ್ಷನ್‌ ಹವಾ? ಹೆಚ್ಡಿಕೆ ಕೋಟೆಯಲ್ಲಿ ಕೈ, ಕಮಲ ಲೆಕ್ಕಾಚಾರವೇನು?

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಸಾಮರ್ಥ್ಯವೇ ಹೆಚ್ಚು ಬಾರಿ ಗೆದ್ದಿದೆ. ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಲೆಕ್ಕಾಚಾರವೇನು? ಇಲ್ಲಿರುವ ಸಮಸ್ಯೆಗಳೇನು? ಜಿದ್ದಾಜಿದ್ದು ಹೇಗಿದೆ? ಸಮಗ್ರ ಚಿತ್ರಣ ಇಲ್ಲಿದೆ.

By

Published : Apr 4, 2023, 5:53 PM IST

Published : Apr 4, 2023, 5:53 PM IST

Channapatna Assembly Constituency Profile
Channapatna Assembly Constituency Profile

ರಾಮನಗರ: ಬೊಂಬೆನಗರಿ ಖ್ಯಾತಿಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಲೆಕ್ಕಾಚಾರ ಜೋರಾಗಿಯೇ ಇದೆ. ಇಬ್ಬರು ಘಟಾನುಘಟಿ ನಾಯಕರ ಮಧ್ಯೆ ಬಿಗ್ ಫೈಟ್ ನಡೆಯುವ ಸಾಧ್ಯತೆ ಗೋಚರಿಸುತ್ತಿದೆ. ಇಬ್ಬರಿಗೂ ಈ ಗೆಲುವು ಅನಿವಾರ್ಯ ಕೂಡಾ.

ಹೆಚ್​ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರವಿದು. ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ಇವರಿಗೆ ಈ ಬಾರಿ ಗೆಲುವು ಕೂಡ ಅಷ್ಟೇ ಅನಿವಾರ್ಯ. ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್​ ಹುರಿಯಾಳಾಗಿರುವ ಕುಮಾರಸ್ವಾಮಿ, ಮತ್ತೊಮ್ಮೆ ಗೆದ್ದು ಮುಖ್ಯಮಂತ್ರಿ ಗಾದಿಗೇರುವ ಆಸೆ ಹೊತ್ತವರು. ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ದು, ಇದೀಗ ಇದೇ ಕ್ಷೇತ್ರದಿಂದ ಗೆದ್ದು 3ನೇ ಬಾರಿಗೆ ಸಿಎಂ ಆಗುವ ಗುರಿ ಹೊಂದಿದ್ದಾರೆ. ಆದರೆ, ಗೆಲುವು ಅಷ್ಟು ಸುಲಭವೇ? ಇದೊಂದು ಸವಾಲಿನ ಪಯಣ ಅಂತಿದ್ದಾರೆ ರಾಜಕೀಯ ಚಿಂತಕರು.

ಅಭ್ಯರ್ಥಿಗಳ ಗೆಲುವು ಮತ್ತು ಸೋಲಿನ ಅಂತರ

ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಕುಮಾರಸ್ವಾಮಿ ಈಗಾಗಲೇ ಹೇಳಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಇವರಿಗೆ ಟಫ್​ ಫೈಟ್​ ಕೊಡಲು ಬಿಜೆಪಿ ಕಾದು ಕುಳಿತಿದೆ. ಕಾಂಗ್ರೆಸ್​ ಕೂಡ ಅದೇ ದಾರಿಯಲ್ಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಈವರೆಗೂ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆಪ್​ ಪಕ್ಷದಿಂದ ಶರತ್​ ಚಂದ್ರ ಎನ್ನುವವರು ಕಣಕ್ಕಿಳಿಯಲಿದ್ದಾರೆ. ಸದ್ಯದ ಚಿತ್ರಣ ಗಮನಿಸಿದರೆ ಕ್ಷೇತ್ರದಲ್ಲಿ ಭಾರಿ ಪೈಪೋಟಿ ನಿರೀಕ್ಷೆ ಇದೆ. ಹಾಗಾಗಿ ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಅನ್ನೋದನ್ನು ಸದ್ಯಕ್ಕೆ ಹೇಳಲಾಗದು.

ಸಿಪಿ ಯೋಗೇಶ್ವರ್

ಸಿಪಿವೈಗೂ ಗೆಲುವು ಅನಿವಾರ್ಯ: ಹೆಚ್.ಡಿ.ಕುಮಾರಸ್ವಾಮಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಸಿದ್ಧರಾಗಿದ್ದಾರೆ. ಬಿಜೆಪಿಯಿಂದ ಟಿಕೆಟ್​ ಸಿಗುವ ವಿಶ್ವಾಸದಲ್ಲಿರುವ ಸಿಪಿವೈ, ಈ ಬಾರಿ ಶತಾಯಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಡಿಕೆ ಶಿವಕುಮಾರ್

ಕಾಂಗ್ರೆಸ್​ಗೆ ಪ್ರತಿಷ್ಠೆ: ‌ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಡ ತನ್ನದೇ ಮತದಾರರನ್ನು ಹೊಂದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ​ ಅವರಿಗೆ ರಾಮನಗರ ಪ್ರತಿಷ್ಠೆಯ ಪ್ರಶ್ನೆ. ಹಾಗಾಗಿ ಗೆಲ್ಲುವ ಅಭ್ಯರ್ಥಿಯನ್ನು ಹಾಕುವ ನಿರ್ಧಾರ ಮಾಡಿದ್ದಾರೆ. ಜೆಡಿಎಸ್​-ಬಿಜೆಪಿಯ ನಡುವೆ ಕಾಂಗ್ರೆಸ್ ತನ್ನದೇ ಆದ ಚುನಾವಣೆ ತಂತ್ರದೊಂದಿಗೆ ಮತದಾರನ ಬೇಟೆಗೆ ಹೊರಟಿದೆ.

ಜೆಡಿಎಸ್​ ಮತ್ತು ಆಪ್​ ಹೊರತು ಇನ್ನುಳಿದ ಯಾವುದೇ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಆದರೆ, ಟಿಕೆಟ್​ ಸಿಗುವ ವಿಶ್ವಾಸದಲ್ಲಿರುವ ಅಭ್ಯರ್ಥಿಗಳು ಮಾತ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ 6 ತಿಂಗಳಿಂದ ಕ್ಷೇತ್ರದಲ್ಲೇ ಬೀಡು ಬಿಟ್ಟಿರುವ ಯೋಗೇಶ್ವರ್, ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತಿದ್ದಾರೆ. ಸ್ವಾಭಿಮಾನಿ ಹೆಸರಿನಲ್ಲಿ ಮತಬೇಟೆ ನಡೆಸುತ್ತಿದ್ದಾರೆ. ಇತ್ತ ಪಂಚರತ್ನ ರಥಯಾತ್ರೆಯ ಮೂಲಕ ಕುಮಾರಸ್ವಾಮಿ ಕೂಡ ಮತಬೇಟೆ ನಡೆಸಿದ್ದಾರೆ. ಅಭ್ಯರ್ಥಿ ಘೋಷಣೆ ಆಗದಿದ್ದರೂ ಕಾಂಗ್ರೆಸ್​ ಕೂಡ ಮತದಾರರ ಗಮನ ಸೆಳೆಯಲು ಹಿಂದೆಬಿದ್ದಿಲ್ಲ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವಿವರ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ. ಹಾಗಾಗಿ ಕ್ಷೇತ್ರದ ಮತದಾರರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ತಂತ್ರಗಳ ಮೊರೆ ಹೋಗಿವೆ. 2,17,573 ಕ್ಷೇತ್ರದಲ್ಲಿರುವ ಒಟ್ಟು ಮತದಾರರು. ಈ ಪೈಕಿ 1,06,535 ಪುರುಷ ಮತದಾರರು, 1,11,029 ಮಹಿಳಾ ಮತದಾರರಿದ್ದು, ಇತರೆ ಮತದಾರರ ಸಂಖ್ಯೆ 09.

ಸ್ಥಾನವಾರು ವಿಧಾನಸಭೆ ಚುನಾವಣೆ

ಕಳೆದ 3 ಚುನಾವಣೆಯ ಫಲಿತಾಂಶ:2008ರ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್,​ 69,356 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಜೆಡಿಎಸ್​ ಅಭ್ಯರ್ಥಿಯಾಗಿದ್ದ ಎಂ.ಸಿ.ಅಶ್ವತ್ಥ 64,426 ಮತಗಳನ್ನು ಪಡೆದು ಸೋಲು ಕಂಡಿದ್ದರು. 4,930 ಸೋಲಿನ ಅಂತರವಾಗಿತ್ತು. 3,434 ಮತ ಗಳಿಕೆಯ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್​ ಬಿಟ್ಟು ಸಮಾಜವಾದಿ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದ ಸಿಪಿವೈ, 80,099 ಮತಗಳನ್ನು ಪಡೆಯುವ ಎರಡನೇ ಬಾರಿ ಗೆಲುವಿನ ನಗೆ ಬೀರಿದ್ದರು. 73,635 ಮತಗಳನ್ನು ಪಡೆದ ಪ್ರತಿಸ್ಪರ್ಧಿ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 6,464 ಮತಗಳ ಅಂತರದಿಂದ ಸೋಲುಂಡಿದ್ದರು. 8,134 ಮತ ಪಡೆದ ಕಾಂಗ್ರೆಸ್,​ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. 2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ಕ್ಷೇತ್ರದ ಶಾಸಕರಾಗಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿಪಿವೈ​, 66,465 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದರು. 21,530 ಕುಮಾರಸ್ವಾಮಿ ಗೆಲುವಿನ ಅಂತರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ.ರೇವಣ್ಣ 30,208 ಮತಗಳನ್ನು ಪಡೆದು ಸ್ಪರ್ಧೆಯ ಮೂರನೇ ಸಾಲಿನಲ್ಲಿ ಕಣಿಸಿಕೊಂಡರು.

ಕ್ಷೇತ್ರದಲ್ಲಿ ಈವರೆಗೆ ಗೆದ್ದ ರಾಜಕೀಯ ಪಕ್ಷಗಳು

ಕ್ಷೇತ್ರದ ವೈಶಿಷ್ಟ್ಯ:ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಬೆಂಗಳೂರು ಗ್ರಾಮಾಂತರ ಲೋಕಸಭೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. 2007 ಚನ್ನಪಟ್ಟಣ ತಾಲೂಕಾಗಿ ಹೊರಹೊಮ್ಮಿತು. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವೈಶಿಷ್ಟ್ಯ. 2018 ರಲ್ಲಿ 1000 ಪುರುಷ ಮತದಾರರಲ್ಲಿ 1042 ಮಹಿಳಾ ಮತದಾರರು ಇದ್ದರು. 2013, 2008 ಮತ್ತು 2004 ಮತ್ತು 1999ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್​, ಸಮಾಜವಾದಿ ಹಾಗೂ ಪಕ್ಷೇತ್ರದ ಅಭ್ಯರ್ಥಿಯಾಗಿ ನಾಲ್ಕು ಬಾರಿ ಗೆದ್ದಿರುವುದು ಕೂಡ ಕ್ಷೇತ್ರದ ವೈಶಿಷ್ಟ್ಯಕ್ಕೆ ಮತ್ತೊಂದು ಸಾಕ್ಷಿ. ಇಲ್ಲಿಯವರೆಗೆ ಈ ಕ್ಷೇತ್ರದಿಂದ ಬಿಜೆಪಿ ಒಂದೇ ಒಂದು ಬಾರಿಯೂ ಗೆದ್ದಿಲ್ಲ. 1985ರ ಚುನಾವಣೆಯಲ್ಲಿ ಬಿಜೆಪಿಗೆ 0.8% ಕಡಿಮೆ ಮತಗಳು ಬಂದಿದ್ದನ್ನು ಮರೆಯುವಂತಿಲ್ಲ. 1967 ರಿಂದ ಈವರೆಗೆ ಐಎನ್‌ಸಿ ಐದು ಬಾರಿ ಗೆದ್ದಿರೆ, ಜೆಎನ್‌ಪಿ ಮತ್ತು ಐಎನ್‌ಡಿ ತಲಾ ಎರಡು ಬಾರಿ, ಜೆಡಿಎಸ್ ಮತ್ತು ಎಸ್‌ಪಿ ತಲಾ ಒಂದು ಬಾರಿ ಗೆದ್ದಿವೆ.

ಮತದಾರರ ಬೆಳವಣಿಗೆ

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ, ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕ್ರಮ: ಅರುಣ್ ಸಿಂಗ್

ABOUT THE AUTHOR

...view details